Monday, November 09, 2015

ಈ ಜಗತ್ತಿನ ಕಥೆ


ಚಿತ್ರಕೃಪೆ : ಅಂತರ್ಜಾಲ

ಇತ್ತೀಚಿಗೆ ಓದಿದ ಪುಸ್ತಕ ಜೋಗಿಯವರ  'ವಿರಹದ ಸಂಕ್ಷಿಪ್ತ ಪದಕೋಶ'. ನೀಳ್ಗತೆ , ಸಣ್ಣ ಕಾದಂಬರಿ , ಗದ್ಯ ಪದ್ಯ ಯಾವ ಹೆಸರಿನಿಂದಲಾದಲೂ ಕರೆಯಬಹುದು.  ಒಂದು ಪ್ರಯಾಣದ ಅನುಭವವನ್ನು ನಮ್ಮದಾಗಿಸಿಕೊಳ್ಳುತ್ತಾ  ಓದಿದರೆ ಪಯಣವೂ ಕಳೆಗಟ್ಟುತ್ತದೆ. ನಾವು ಕೇಳಿಕೊಂಡು ಮರೆತ ಅಥವಾ ಇನ್ನೂ ಕೇಳಿಕೊಳ್ಳದಿರುವ ಪ್ರಶ್ನೆಗಳಿಗೆ ಮತ್ತೆ ದನಿಯಾಗುವ ಅಕ್ಷರಗಳು .  'ಫೇಸ್ ಬುಕ್  ಡಾಟ್ ಕಾಂ ....' ಆದ ಮೇಲೆ ಜೋಗಿಯವರ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಅಲ್ಲಲ್ಲಿ ಓದಿದ ಕೆಲವು ಸಾಲುಗಳು ಮತ್ತು ಪುಸ್ತಕದ ಗಾತ್ರ  ಇಷ್ಟವಾಗಿ ತಂದದ್ದು 'ವಿರಹ...'  ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗವೆಂಬುದು ನನ್ನ ತಿಳುವಳಿಕೆ. ಈ ನವೀನ ಪ್ರಯೋಗ ಇಷ್ಟ ಆಯ್ತು. ಕಥೆಯ ಪಾತ್ರಗಳಾದ   ರಾಜೀವ , ವಂದನಾ , ವಿಶ್ವಾಸ ಎಲ್ಲರೂ ನಮ್ಮೊಳಗೇ ಇದ್ದಾರೆ. ಕಂಡುಕೊಳ್ಳುವ ಪ್ರಕ್ರಿಯೆಯೂ ಚಾಲ್ತಿಯಲ್ಲಿರಬಹುದು, ಕ್ರಿಯೆಯ ಇಂಧನವಾಗಿ ಇಂತಹ ಪುಸ್ತಕಗಳು ಒದಗಿಬರುತ್ತವೆ . ಈ ಪುಸ್ತಕದ ಓದು ಒಂದು ಅನುಭವವಾದ್ದರಿಂದ ಅದನಿಲ್ಲಿ ದಾಖಲಿಸುವುದು ಕಷ್ಟ.

ಮುನ್ನುಡಿಯಿಂದ : 'ಅಡ್ಡಡ್ಡ ಇದ್ದ ಮನೆಗಳು ಉದ್ದುದ್ದವಾಗಿ ಬೆಳೆದಿವೆ ಆದರೆ ಅಲ್ಲೂ ಕಥೆಗಳಿವೆ . ತುಮುಲಗಳಿವೆ , ಸ್ವಾರ್ಥ , ಸಂತೋಷ, ಪ್ರೀತಿ ,  ದ್ವೇಷ , ವಿಶ್ವಾಸ , ದ್ರೋಹ ಎಲ್ಲವೂ ಇದೆ.'  ಕೆಲವು ಕಥೆಗಾರರಿಗೆ ಹಲವು ಕಥೆಗಳು ಈ ಅಪಾರ್ಟ್ಮೆಂಟ್ಗಳ ಐಟಿ  ಬಿಟಿ ಜಗತ್ತಿನಲ್ಲಿ ಕಂಡಿವೆ. ಅಪಾರ್ಟ್ಮೆಂಟು ಗಳಾದರೇನು ? ಅಲ್ಲೂ ಮನುಷ್ಯರಿದ್ದಾರೆ , ಮನಸುಗಳಿವೆ. ನಿಜ ಅಲ್ವಾ ?
ಒಂದು ಅಪಾರ್ಟ್ಮೆಂಟಿನ ಕಥೆಯನ್ನು ಹೀಗೆ ಹೇಳಬಹುದು  : ಮಹಾನಗರಿಗೆ ಬಂದ ಎರಡು ಮೂರು ವರ್ಷಗಳಲ್ಲಿ ಯುವಕನಿಗೆ ಇಲ್ಲಿನ ಭೂಮಿಯ ಬೆಲೆ ಅಂದಾಜಾಗಿದೆ , ಭೂಮಿಯ ಮೇಲಿನ ಮನೆಯ ಆಸೆ ಬಿಟ್ಟ ಆತ ಹಸೆಮಣೆ ಏರುವ ಮುನ್ನ  'ಅಪಾರ್ಟ್ಮೆಂಟ್ ಮನೆ' ಖರೀದಿಸಿದ್ದಾನೆ . ಸಂಬಳದ ಕಾಲು ಭಾಗ ಸಾಲಕ್ಕೆ ಮೀಸಲಾದರೂ ಉಳಿದ ಮುಕ್ಕಾಲಿನಲ್ಲಿ ಜೀವನಕ್ಕೆ ಕೊರತೆ ಇಲ್ಲ . ಯುವಕನಿಗೊಂದು ಜೊತೆ ಸಿಕ್ಕಿತು , ಅವಳೂ ಇವನಂತೆ ಪದವಿಧರೆ , ಉದ್ಯೋಗಸ್ಥೆ. ತಂದೆ ತಾಯಂದಿರು ತಂತಮ್ಮ ಊರುಗಳಲ್ಲಿದ್ದಾರೆ . ಆಗೀಗ ಮಹಾನಗರಿಯ ಭೇಟಿ. ಮಾಲಿನ ಹೊಳೆವ ಗಾಜುಗಳು, ಸದಾ ಚಲಿಸುತ್ತಾ -ಹೆಜ್ಜೆ ಇಟ್ಟರೆ ಮೇಲೊಯ್ಯುವ ಎಸ್ಕಲೇಟರುಗಳು , ಜಾರುವ ನೆಲಗಳು , ರುಚಿಯಾದ ತಿಂಡಿ ಬಡಿಸುವ ದುಬಾರಿ ಹೊಟೇಲುಗಳು , ಎಲ್ಲೋ ಬುಕ್ ಮಾಡಿ ಎಲ್ಲೋ ಕುಂತು ನೋಡುವ ಸಿನೆಮಾಗಳು ...  ಯಾವುದೂ ಅವರ ಊರಿಗಿಂತ ಆಕರ್ಷಣೀಯವಾಗಿಲ್ಲ , ಇದು ಅವರ  ಮಟ್ಟಿಗಿನ ಸತ್ಯ . ಹಾಗಾಗಿ ತಿಂಗಳು ತುಂಬಿದ ನಂತರ ಅವರು ಮಹಾನಗರಿಯಲ್ಲಿ ಉಳಿಯುವುದಿಲ್ಲ.

ಹೊಸದಾಗಿ ಮದುವೆಯಾದ ಯುವಕ ,ಯುವತಿಗೂ ಇದು ಸೌಕರ್ಯವೇ.  ತಂದೆ ತಾಯಿ ಬಂದ ದಿನಗಳಲ್ಲಿ ಸಣ್ಣ ಪುಟ್ಟ ಕಿರಿಕಿರಿಗಳು ಸಾಮಾನ್ಯ . "ನಿನ್ನಮ್ಮನ ದನಿ ಜೋರು , ಎಷ್ಟು ಮಾತಾಡ್ತಾರೆ­ " "ಬೆಳ್  ಬೆಳಿಗ್ಗೆ ಐದು ಗಂಟೆಗೆ ಎದ್ದು ನಿನ್ನಪ್ಪ ಯಾವ ಕೆಲಸಕ್ಕೆ ಹೋಗ್ಬೇಕು ? " . ಅಲ್ಲಿನ್ನೂ ಸಂಬಂಧಗಳು ಹುಟ್ಟಿಲ್ಲ , ಅವರಿನ್ನೂ 'ನಿನ್ನಪ್ಪ' , 'ನಿನ್ನಮ್ಮ' . ಒಟ್ಟಿನಲ್ಲಿ ಹೆಚ್ಚಿನ ಮನೆಗಳಲ್ಲಿ ತಂದೆ ತಾಯಿ ಇವರೊಟ್ಟಿಗೆ ಇರುವುದಿಲ್ಲ . ಎಷ್ಟು ಕಾಲ ಒಟ್ಟಿಗಿದ್ದೆವೆಂಬುದಕ್ಕಿಂತ ಒಟ್ಟಿಗಿದ್ದಾಗ ಒಂದಾಗಿರುವುದು ಮುಖ್ಯವೆಂಬ ಧೋರಣೆ ಇಲ್ಲಿ ಸಾಮಾನ್ಯ . ಇನ್ನು ಈ ನವ ಜೋಡಿ ಫಾರಿನ್ ಗೆ ಹಾರಿದರೆ ಅಲ್ಲೂ ಇದೇ ಕಥೆ ಒಂದಷ್ಟು ಬದಲಾವಣೆಗಳೊಂದಿಗೆ ರಿಪೀಟ್ ಆಗುತ್ತದೆ .

ಹೀಗೆ ಕಾಲ ಸಾಗುವಾಗ , ಅವಳ ಒಡಲಲ್ಲಿ ಕುಡಿ ಅರಳುತ್ತದೆ . ಬಸಿರನ್ನು ಇಬ್ಬರೇ ನಿಭಾಯಿಸುವುದು ಕಷ್ಟವಲ್ಲ ಆದರೆ ಕಂದನನ್ನು ? ಮತ್ತೊಬ್ಬರ ಸುಪರ್ದಿಯಲ್ಲಿ ಬಿಟ್ಟು ಹೋಗುವುದಕ್ಕಿಂತ ನಮ್ಮವರಿದ್ದರೆ ಒಳ್ಳೆಯದು ಎಂಬ ಸತ್ಯ ಅರಿವಾಗುತ್ತದೆ. "ಅಯ್ಯೋ ಮಗಳ ಮನೆಲಿರೋದಾ ?  ನಿಮ್ಮತ್ತೆ ಮಾವನ್ನ ಕರಿ " ಅಂತ ಅವಳ ತಂದೆ ತಾಯಿ, "ಅಲ್ಲಿ  ಯಾಕೋ ಹಿಡಿಸೋಲ್ಲ ಕಣೋ ಅದೀಗ ಸೊಸೆಯ ಮನೆ ಅನ್ನಿಸ್ತಾ ಇದೆ  " ಅಂತ ಇವನ ತಂದೆ ತಾಯಿ, ಒಂದಷ್ಟು ಜಗ್ಗಾಟ ಮಾಡಿ ಕೊನೆಗೆ ಸರದಿಯಂತೆ ಮೊಮ್ಮಗುವಿನ ಸೇವೆಗೆ ಹಾಜರಾಗುತ್ತಾರೆ.  ಅಳಿಯನ ಸಿಡುಕು , ಬೇಜವಾಬ್ದಾರಿ , ಎಷ್ಟು ಮಾಡಿದರೂ ತೃಪ್ತಿ ಹೊಂದದ ಅತ್ತೆ ಮಾವ ... ಅವಳಮ್ಮನ ತಲೆನೋವುಗಳು. ತನ್ನಷ್ಟು ರುಚಿಯಾಗಿ ಅಡುಗೆ ಮಾಡದ , ಮಾತು ಮಾತು ಮಾತಿಗೂ ತನ್ನ 'ಪುಟ್ಟ'  ಮಗನ ಮೇಲೆ ರೇಗುವ, ಮಗುವನ್ನು ಬಿಟ್ಟು ಕೆಲಸಕ್ಕೆ , ಪಾರ್ಲರ್ ಗೆ ಹೋಗುತ್ತೆನೆನ್ನುವ  ಸೊಸೆ  ಅವನಮ್ಮನ ಸಮಸ್ಯೆಗಳು . ಬೀಗರನ್ನು ದೂರುವುದು ಈಗೀಗ ಕಡಿಮೆಯಾಗಿದ್ದರೂ ಆ ಸೀನಿಗೂ ಇಲ್ಲಿ ಅವಕಾಶ ಉಂಟು . ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ಕೋಲ್ಡು ಫಿವರಿನಷ್ಟೇ  ಕಾಮನ್ನು . ಬೆನ್ನು , ಸೊಂಟಗಳ ಬಲ ಕಳೆದುಕೊಂಡ ಅಜ್ಜ , ಅಜ್ಜಿಯರು ಮಕ್ಕಳನ್ನು 'ಪ್ರ್ಯಾಂ' ಎಂಬ ಗಾಡಿಯಲ್ಲಿ ಕೂಡಿಸಿ ದಿನವೂ ಅಪಾರ್ಟ್ಮೆಂಟಿನ  ಕೆಳಗಿನ ಪುಟ್ಟ ಆಟದ ಮೈದಾನವಾದ ಕಾಮನ್ ಏರಿಯಾಗೆ ಕರೆದೊಯ್ಯುತ್ತಾರೆ. ಪಕ್ಕದ ಮನೆಯ ಮಗುವಿನ ಸಲುವಾಗಿ ತೆಲುಗೋ , ಮಲೆಯಾಳ ಅಜ್ಜ ಅಜ್ಜಿಗಳೋ ಬಂದಿದ್ದಾರೆ .  ಭಾಷಾಭೇದವಿಲ್ಲದೇ ಅಲ್ಲೊಂದು ಹಿರಿಯ ನಾಗರಿಕರ ವೇದಿಕೆ ಸಿಧ್ಧವಾಗುತ್ತದೆ . ಇದರ ನಡುವೆ ಅತ್ತೆ -ಸೊಸೆ , ಅತ್ತೆ -ಅಳಿಯ , ಅಮ್ಮ -ಮಗಳು , ಮಾವ -ಸೊಸೆ ಹೀಗೆ ಎಷ್ಟು ಪಾತ್ರಗಳ ಕಾಂಬಿನೇಶನ್ನುಗಳನ್ನೂ ಸೃಷ್ಟಿಸಬಹುದೋ  ಅಷ್ಟರ ನಡುವೆಯೂ ನಡೆಯುವ ವಾದಗಳು, ಕನಿಷ್ಟ ಎಂದರೂ ೨೫ ಎಪಿಸೋಡುಗಳಿಗೆ ಸರಕು. ಧಾರಾವಾಹಿ ಬರಹಗಾರರು ಇನ್ನೂ ಈ ಜಗತ್ತಿಗೆ ಅದೇಕೆ  ಕಾಲಿಟ್ಟಲ್ಲವೋ ? ಉಳಿದವರಂತಿದ್ದೂ ಉಳಿದುಹೋಗುವವರ ಕಥೆ ಇದು.  ಎಲ್ಲೋ ಸಿಗದ ಭಡ್ತಿ ಇನ್ನೆಲ್ಲೋ ಸಿಟ್ಟಾಗಿ ಪರಿವರ್ತನೆಯಾಗುತ್ತದೆ. ಗಂಡ ಹೆಂಡಿರು ಉಂಡು ಮಲಗಿದರೂ ಅಲ್ಲೊಂದು ಪರದೆ ಇದೆ. ಆಗೀಗ 'ನಮ್ಮ ಸಂಸಾರ  ಆನಂದ ಸಾಗರ ..' ಎನ್ನುತ್ತಲೇ ವಾರಾಂತ್ಯಕ್ಕಾಗಿ ಕಾಯುವವರ ಕಥೆ ಇದು.  ಇಲ್ಲಿ ತಮ್ಮದೇ ಆದ ಹವ್ಯಾಸಗಳನ್ನು ಕಟ್ಟಿಕೊಂಡು ತೃಪ್ತಿಯನ್ನು ಕಂಡುಕೊಂಡವರಿದ್ದಾರೆ,  ಮೊದಲ ತೇದಿಯ ಮಹಿಮೆಯಿಂದ ನಾನಿಲ್ಲಿ ಉಳಿದ್ದೇನೆ ಎಂದು  ಖುಲ್ಲಂ ಖುಲ್ಲಾ ಹೇಳುವವರಿದ್ದಾರೆ . ಒಟ್ಟಿನಲ್ಲಿ ಎಲ್ಲ ರೀತಿಯ ರಂಗುಗಳ 'ರಂಗತರಂಗ' . 

ಇದು ವರ್ಟಿಕಲ್ ವಠಾರಸ್ಥರ ಸ್ಥೂಲ ಕಥೆ . ಕಾಂಬಿನೆಶನ್ನುಗಳು ಬದಲಾದಂತೆ, ದೇಶ -ಕಾಲಕ್ಕನುಸಾರವಾಗಿ ಅಸಂಖ್ಯ ಕಥೆಗಳ ಕಣಜ ಇದು.  ಮಾನವ ಬದುಕಿನ ಮೂಲ , ಅಲ್ಲಿನ ಪ್ರಶ್ನೆಗಳು ಒಂದೇ ಆದರೂ ಪ್ರತಿಯೊಬ್ಬರ ಉತ್ತರಗಳು ಬೇರೆ , ಅವರದನ್ನು ಕಂಡುಕೊಳ್ಳುವ ಹಾದಿ ಬೇರೆ.  ಬಸಂತ ಕುಮಾರ ಮತ್ತು ಮಹಾಂತ ಕುಮಾರ ಒಂದೇ ಫ್ಲೋರಿನಲ್ಲಿ ಬದುಕುತ್ತಿರಬಹುದು , ಅವರು ಕೆಲಸ ಮಾಡುವ ಕ್ಷೇತ್ರ , ಕಿರಾಣಿ ಕೊಳ್ಳುವ ಆನ್ಲೈನ್ ಮಳಿಗೆ , ವಾರಾಂತ್ಯದಲ್ಲಿ ಹೋಗುವ ರೆಸಾರ್ಟು ಎಲ್ಲವೂ ಒಂದೇ ಆದರೂ  ಬಸಂತನೇ ಬೇರೆ ಮಹಾಂತನೇ ಬೇರೆ.  ಒಪ್ಪಿಕೊಂಡ ಜೋಗಿಯವರಿಗೆ ಧನ್ಯವಾದಗಳು.




(ಈಗಾಗಲೇ ಪ್ರಕಟವಾದ ಹಳೆಯದೊಂದು ಕವಿತೆ , ಈ ಸಂದರ್ಭಕ್ಕೆ ಸರಿಹೊಂದಬಹುದೆಂದು ಮತ್ತೆ ಹಾಕಿದ್ದೇನೆ )

ಅಪಾರ್ಟ್ಮೆಂಟಿನ ಬಾಲ್ಕನಿಯ ಅಮೃತ ಬಳ್ಳಿ
ಹಬ್ಬ ಬೇಕು, ಮನೆಗೆ ಹಾಕಿದ ಗ್ರಿಲ್ಲುಗಳ ನಡುವೆ.
ಆದರದೇಕೋ ಹಬ್ಬದು ?

ಕಬ್ಬಿಣದೊಂದಿಗಿನ   ನಂಟು ಬೇಡವಾಗಿದೆ ಅದಕೆ
ಎಲ್ಲಿಂದಲೋ ಒಂದು ಮಾರು ಮಾಸಿದ
ಚಳ್ಳೇದುರಿ  ತಂದು ಒಂದು ಮೊಳೆ ಹೊಡೆದು ಕಟ್ಟಿದೆ
ಅಮೃತಮತಿಗೆನಾನಂದ, ಏರಿದ್ದೆ ಏರಿದ್ದು,
ಅತ್ತ ಒಂದೆಲೆ, ಇತ್ತ ಒಂದೆಲೆ.

ಹೇಗೆ ಹೇಳಲಿ?   ಅಮುದೆಗೆ,
ಕಬ್ಬಿಣದ ನಡುವೆಯೂ ಬೆಳೆಯ ಬಹುದು ,
ಸೀಮೆಂಟಿನ ಕುಂಡದಲ್ಲೂ ಬೇರೂಡ ಬಹುದು.
ಕುಂಡವಾದರೇನು, ಅದರಲ್ಲೂ ಮಣ್ಣಿದೆ.
ಅಪಾರ್ಟ್ ಮೆಂಟಾದರೇನು, ಅಲ್ಲೂ ಮನೆ ಇದೆ !

4 comments:

  1. ‘ಅಪಾರ್ಟ್ ಮೆಂಟಾದರೇನು, ಅಲ್ಲೂ ಮನೆ ಇದೆ !’ ಈ ಒಂದೇ ಸಾಲು ಸಂಸಾರದ ತಿರುಳನ್ನು ಹೇಳುತ್ತದೆ!

    ReplyDelete
  2. ಜೋಗಿಯವರ ಬರಹಗಳೇ ಹಾಗೆ ಅವರ ಪುಸ್ತಕಗಳನ್ನು ಹುಡುಕಿ ಓದುವಂತೆ ಮಾಡುತ್ತದೆ. ಅವರ ಪುಸ್ತಕ ಓದಿ ಪ್ರಭಾವಿತರಾಗಿ ನೀವು ಬರೆದ ಬರವಣಿಗೆ ನನಗೆ ಇಷ್ಟವಾಯಿತು.

    ReplyDelete
  3. ಚಂದ ಸ್ವರ್ಣಾ ಬರಹವೂ ಮತ್ತೆ ಕವನವೂ.

    ReplyDelete
  4. ತುಂಬಾ ಚೆನ್ನಾಗಿದೆ ಮೇಡ್ಂ

    ReplyDelete