Thursday, May 21, 2015

ನೋವು - ಹುತ್ತ

ನೋವಿನಲ್ಲಿದ್ದವರಿಗೆ ತಿಳುವಳಿಕೆಯನ್ನೆಲ್ಲಾ ಪಣಕ್ಕಿಟ್ಟು ಸಲಹೆ ಕೊಡಬೇಡಿ . ಅಸಹಾಕತೆ ಸಿಟ್ಟಿನ ತುತ್ತ ತುದಿಯನು ತಲುಪಿಸಿರುತ್ತದೆ. ಅಲ್ಲಿ ಮಂಡಿಯೂರಿ ಕಂಬನಿಯಲ್ಲಿ ಮೀಯುತ್ತಿರುವರಿಗೆ ಸಂಪೂರ್ಣ ಕಿವುಡು. ಇತ್ತೀಚಿಗೆ ಇದನ್ನು ಓದಿದ್ದು ಭಾರತಿ ಬಿ.ವಿ ಬರೆದ ಸಾಸಿವೆ ತಂದವಳು.. ದಲ್ಲಿ . ಅನುಭವವಾಗಿದ್ದು ಇತ್ತೀಚಿಗೆ .


ಮಂಡಿಯೂರಿ 'ಅಮ್ಮಾ....'
ಎಂದೆ , 'ಎದುರಿನವರು
ಎಲ್ಲ ಸರಿಹೋಗತ್ತೆ ಬಿಡು'
ಎನ್ನುವರೆಂದು ಕಾದೆ
'ಈ ವಯಸಿಗೆ ನೋವೇ ? ,
ತೂಕ ಕಡಿಮೆ ಮಾಡಿ ,
ಎಣ್ಣೆ ಬಿಟ್ಟು ಬಿಡಿ ,
ಬೆಣ್ಣೆಯ ಕಡೆ ನೋಡ ಬೇಡಿ '
ಮುಂದಿನ ಮಾತುಗಳು ಕೇಳಲಿಲ್ಲ
ಮಾಡಿದ ತಪ್ಪಿಗೀಗ ಅನುಭವಿಸು
ಎಂಬಂತ ನೋಟ ಇರಿಯಿತು
ಕಟ್ಟಿದ್ದ ಕಟ್ಟೆ ಒಡೆಯಿತು
ಹರಿದ ನೀರು ನೋವ ನೀಗಲಿಲ್ಲ
ನೋವಿನ ಕಾರಣ ಅವರಿಗೆ ತಿಳಿಯಲಿಲ್ಲ

ವಯಸ್ಸೇ ಕೇಳಿ ಬರದು
ಇನ್ನು ನೋವಿಗೆ ಅನುಮತಿಯೇ ?
ತಪಸ್ಸಿನ ಫಲವೇ ತೂಕ ?
ಎಣ್ಣೆಯಲ್ಲೇನು ಈಜಬಹುದೇ ?
ನೋವಿಗೆ ಬೇಕಿದ್ದದ್ದು ಒಂದಷ್ಟು ಮುಲಾಮು ,
ಬಂದ ನೋವಿಗೆ ಹೋಗುವ ದಾರಿಯೂ ಗೊತ್ತು
ಎಂಬ ಭರವಸೆ .
ತನ್ನದಲ್ಲದ ನೋವಿಗೆ ನಾಲಿಗೆಯನುಳಿದು
ಎಲ್ಲ ಇಂದ್ರಿಯಗಳು ಕಿವುಡು
ಜಗಕೆ ಕವಿದಿದೆ ಎಂಥದೋ ಕುರುಡು .

ಹತ್ತರ ಹುತ್ತದ ನಡುವೆನಿಂತು : ಬ್ಲಾಗ್ ಬರೆಯಲು ಆರಂಭಿಸಿ ಹತ್ತು ಬಾರಿ ವರುಷಗಳು ಬದಲಾಗಿವೆ . ಕುಂಟುತ್ತಾ , ಎಡುವುತ್ತಾ , ತೆವಳುತ್ತಾ ಇಲ್ಲಿಗೆ ಬಂದು ನಿಂತಿದೆ . ನಾನು ಬ್ಲಾಗ್ ಓದಿ ಎಂದು ಹೇಳಿದ್ದು ಅತೀ ಕಡಿಮೆ ಜನಕ್ಕೆ .
ಇಲ್ಲಿಗೆ ಬಂದು ಓದಿದವರ ಸಂಖ್ಯೆ ೧೦ ಸಾವಿರ ಮೇಲೊಂದಷ್ಟು.

ತಪ್ಪದೇ ಓದಿ ಪ್ರತಿಕ್ರಯಿಸುವ ಹಿರಿಯರಾದ ಸುನಾತ್ ಕಾಕಾ , ಎಷ್ಟು ದಿನವಾಯ್ತು ಬ್ಲಾಗ್ ಕಡೆ ಬಂದು ಎಂದು ನೆನಪಿಸುವ ಬದರಿ ಸರ್ ಮತ್ತು ಪ್ರೋತ್ಸಾಹಿಸಿದ ಎಲ್ಲರಿಗೂ ಅಭಾರಿ.

ಚಿತ್ತ ಹುತ್ತ ಕಟ್ಟಿದರೆ
ಹುಟ್ಟುವುದೊಂದು ಮಹಾಕಾವ್ಯ
ಹುತ್ತದ ಹಾವು ಮಲಗಿ
ಮೇಲೇರಿ ಹೂವಾದೊಡೆ
ಬದುಕಿನ ಕಾವ್ಯ ಸುಶ್ರಾವ್ಯ .




1 comment:

  1. ಸ್ವರ್ಣಾ,
    ರುಚಿ ಇಲ್ಲದ ಹತ್ತು ಪದಾರ್ಥಗಳಿಗಿಂತ, ಸವಿಸವಿಯಾದ ಒಂದು ಪದಾರ್ಥ ಮೇಲಲ್ಲವೆ? ನೀವು ಬರೆದ ಹನಿ-ಬನಿಗಳನ್ನು, ಕಿರುಕಾದಂಬರಿಯನ್ನು ಓದಿ ನಾನು ಸಾಹಿತ್ಯಸುಖವನ್ನು ಪಡೆದಿದ್ದೇನೆ. ಇದು ಪ್ರೋತ್ಸಾಹಿಸುವದಕ್ಕೆ ಹೇಳುವ ಮಾತಲ್ಲ; ನನ್ನ ಮನದಾಳದ ಮಾತು. ನಿಮ್ಮ ಬರಹ ಇತ್ತೀಚಿಗೆ ಕಡಿಮೆಯಾಗಿದ್ದರೆ, ಅದಕ್ಕೆ ಅನೇಕ ಕಾರಣಗಳು ಇರಬಲ್ಲವು. ಅವೆಲ್ಲವನ್ನು ಹಿಂದೊತ್ತಿ, ನೀವು ಮತ್ತೆ ಸಕ್ರಿಯರಾಗಿರಿ ಎಂದು ಹಾರೈಸುತ್ತೇನೆ. ನಿಮ್ಮ ಬರಹದ, ನಿಮ್ಮ ಬದುಕಿನ ಕಾವ್ಯ ಸುಶ್ರಾವ್ಯವಾಗಲಿ!

    ReplyDelete