Thursday, August 20, 2015

ನೀರು ಲೋಹದ ಚಿಂತೆ - ವಿಜಯ ದಬ್ಬೆ




ಚಿತ್ರಕೃಪೆ : ಅಂತರ್ಜಾಲ

ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವಿಜಯ ದಬ್ಬೆಯವರ ಕವನ ಸಂಕಲನವನ್ನು ಪಠ್ಯದ ಭಾಗವಾಗಿ ಓದಿದಾಗಿನಿಂದ ಅವರ ಬಗ್ಗೆ ತೀರದ ಕೂತುಹಲವಿದೆ. ದಾರುಣ ಅಪಘಾತದಿಂದ ಚೇತರಿಸಿಕೊಂಡು, ಬದುಕಿನತ್ತ ಮುಖ ಮಾಡಿ  ಮತ್ತೆ ಲೇಖನಿ ಹಿಡಿದಿರುವ ಅದಮ್ಯ ಜೀವನೋತ್ಸಾಹದ ಮಹಿಳೆಯಾಗಿ ವಿಜಯ ದಬ್ಬೆಯವರು ಇಷ್ಟವಾಗುತ್ತಾರೆ. ಹೆಸರಿನೊಂದಿಗೆ ಗೂಗಲಿಸಿದರೆ  ಅವರ ಬಗ್ಗೆ ಹತ್ತು ಹಲವು ಬರಹಗಳು ಮತ್ತು ಅವರ ಸಂದರ್ಶನಗಳು ತೆರೆದುಕೊಳ್ಳುತ್ತವೆ. ರೂಪ ಹಾಸನ ಅವರ ವರ್ತಮಾನ ಪತ್ರಿಕೆಯಲ್ಲಿನ ಬರಹ ದಬ್ಬೆಯವರ ಬಗ್ಗೆ ಕೆಲ ಮುಖ್ಯ ಮಾಹಿತಿಗಳನ್ನು ಒದಗಿಸುವುದರ ಜೊತೆಗೆ ಅವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಸುತ್ತದೆ. ಸ್ತ್ರೀವಾದ , ಮಹಿಳಾಪರ ಹೋರಾಟಗಳು ಹುಟ್ಟಿ,  ಬೆಳೆದ  ನಂತರದಲ್ಲಿ ಹುಟ್ಟಿದ ಪೀಳಿಗೆ ನಮ್ಮದು. ಆದರೂ ದಬ್ಬೆಯವರನ್ನು ಓದಿದಾಗ ಕೆಲವು ಚಿಂತನೆಗಳು , ಕೆಲವು ಸಾಲುಗಳು ಸೆಳೆದವು. ಆ ಸಾಲುಗಳಲ್ಲಿನ ಪ್ರಾಮಾಣಿಕ ಕಾಳಜಿ, ಅಬ್ಬರವಿಲ್ಲದ ಆದರೆ ದೃಢವಾದ ದನಿ ಇಷ್ಟವಾಯಿತು.  ಅವರ  'ನೀರು ಲೋಹದ ಚಿಂತೆ' ಕವನ ಸಂಕಲನ  ಬಿಡುಗಡೆಯಾಗಿದ್ದು ೧೯೮೫ರಲ್ಲಿ, ಅಲ್ಲಿನ ಕೆಲವು ಸ್ತ್ರೀ ಪರ ಕಾಳಜಿಯುಳ್ಳ ಕವಿತೆಗಳ ಬಗೆಗಿನ ನನ್ನ ಗ್ರಹಿಕೆ ಇಲ್ಲಿದೆ.

೮೦ರ ದಶಕದ ದಾಂಪತ್ಯದಲ್ಲಿ ಎಲ್ಲವೂ ಗಂಡಸಿನ ಮರ್ಜಿಯ ಮೇಲೆ ನಡೆಯುತ್ತಿರಲಿಲ್ಲ ಆದರೆ ಹೆಣ್ಣಿಗೆ ಇನ್ನೇನೋ ಬೇಕಿತ್ತು . ಅದೇನು ? ಎಂಬ ಪ್ರಶ್ನೆಗೆ  ಉತ್ತರ  'ಪತಿದೇವರಿಗೊಂದು ಬಹಿರಂಗ ಪತ್ರ' ಕವಿತೆಯಲ್ಲಿದೆ. ಕವಿತೆಗೆ ದನಿಯಾದವಳು ಗಂಡನಿಗೆ ಹೇಳುತ್ತಾಳೆ : 'ಹಿಂದಿನವರಂತೆ ,  ಪ್ರತೀ ಮುಂಜಾನೆಯೂ ಹೆಂಡತಿ ಪಾದಕ್ಕೆ ಹಣೆ ಹಚ್ಚಬೇಕೆಂಬ ನೀರೀಕ್ಷೆ ನಿನಗಿಲ್ಲ. ಆದರೆ ನೀನು ಕ್ರಾಪು ತಿದ್ದುವ ವೇಳೆ  ಕಾಫಿ  ಲೋಟದೊಂದಿಗೆ ಪರದೆಯ ಹಿಂದೆ ಕಾಯುವ ಪುಣ್ಯ ನನ್ನದು.'  ಮೂರ್ನಾಲ್ಕು ದಕಶಕಗಳ ಹಿಂದೆ ಮಹಿಳೆ ಹೊರ ಹೋಗಿ ದುಡಿಯಲು ಆರಂಭಿಸಿದ್ದರೂ ಮನೆಯಲ್ಲಿರುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಗಂಡ ಸ್ಕೂಟರ್ ಸ್ಟಾರ್ಟ್ ಮಾಡುವ ವೇಳೆ ಬಾಗಿಲಲ್ಲಿ ನಿಂತು ಕೈ ಬೀಸಿ ಸಂಜೆ ಅವನು ಬರುವ ಹೊತ್ತಿಗೆ ಅಲಂಕರಿಸಿಕೊಂಡು ಬಾಗಿಲಲ್ಲಿ ಕಾಯುತ್ತಿದ್ದವಳ ಚಿತ್ರಣ ಹಲವು ಕಡೆ ಬಂದು ಹೋಗಿದೆ . ದಬ್ಬೆಯವರು ಅವಳಿಗೆ ದನಿಯಾಗಿದ್ದಾರೆ. ಅವನ ಬೇಕು ಬೇಡಗಳ ಸುತ್ತ ಗಿರಕಿಹೊಡೆವ ಬದುಕು ಅವಳಿಗೆ ಬೇಡವಾಗಿದೆ. ಸೋಕದಂತೆ ಕಡಲ ದಂಡೆಯಲ್ಲಿ ಕುಳಿತು ಮಾತನಾಡುವ ಆಸೆ ಅವಳದ್ದು. ಬದುಕಿನ ಕಡಲ ದಂಡೆಯಲ್ಲಿ ಕ್ರಾಂತಿಯ ಬಾವುಟ ಹುಗಿದು ಸದಾ ಹಸಿರಿನ ಕನಸು ಕಾಣುವ ಅವಳನ್ನು ಜನ ಸುಲಭವಾಗಿ ಒಪ್ಪಲಾರರೆಂಬ ಸತ್ಯದ ಅರಿವಿರುವ ಹೆಣ್ಣು ಅವಳು. ಈ ಕ್ರಾಂತಿಯ ಫಲವನ್ನು ಉಂಡ ನನ್ನ ಪೀಳಿಗೆಗೆ ಈ ಕವಿತೆ ಎಲ್ಲಿಂದಲೋ ತೇಲಿ ಬರುವ  ಅಮ್ಮನ ಗುನುಗಿನಂತೆ ಕೇಳಬಹುದು. ಈ ಕಾರಣಕ್ಕಾಗಿಯೇ ನನಗೀ ಕವಿತೆ ಇಷ್ಟವಾಗಿದ್ದು.

ಸೀತೆ , ಅಹಲ್ಯೆ ದ್ರೌಪದಿಯರ ನೋವನ್ನು ಸಾಮಾನ್ಯವಾಗಿ ಎಲ್ಲ ಕವಯಿತ್ರಿಯರೂ ಒಂದಿಲ್ಲೊಂದು ರೀತಿಯಲ್ಲಿ ಹಾಡಾಗಿಸಿದ್ದಾರೆ. ಅವುಗಳನ್ನು ಓದುವಾಗಲೆಲ್ಲಾ ಇತ್ತೀಚಿಗೆ ನನಗೊಂದು ಪ್ರಶ್ನೆ ಬಿಟ್ಟೂ ಬಿಡದೇ ಕಾಡಿದೆ. ಕವಿತೆಯಲ್ಲಿ ವ್ಯಕ್ತವಾದ ನೋವು ಸೀತೆಯದ್ದೋ ? ಕವಯಿತ್ರಿಯದ್ದೋ ? ನೋವು ಸೀತೆಯದ್ದೇ ಆದರೆ ಅಲ್ಲಿ ರಾಮನ ನೋವೂ ಕಾಣ ಬೇಕಿತ್ತಲ್ಲವೇ ?  ಸೀತೆಯ ಕಂಬನಿಗೆ ಲೋಕವೇ ಕಣ್ಣಾಯಿತು , ರಾಮನ ನೋವು ಅಂತಃಪುರವನ್ನು ದಾಟಲಿಲ್ಲ. ಇರಲಿ , ಇದೊಂದು ಮುಗಿಯದ ವಾದದ ಸರಣಿ . ಬದುಕಿನ ಯಾವ ಹಂತದಲ್ಲಿದ್ದೇವೆ ಎಂಬುದರ ಮೇಲೆ ನಮ್ಮ ಪಾಲಿನ ಸತ್ಯ ಅವಲಂಬಿತವಾಗಿರುತ್ತದೆ.  ದಬ್ಬೆಯವರ ಕವಿತೆಯಲ್ಲಿ  ದಿನವೂ ಗರಗಸಕ್ಕೆ ತಲೆ ಕೊಡುವ ಹೆಣ್ಣೊಬ್ಬಳು ಸೀತೆಯ ಮೂಲಕ 'ಪರಂಪರೆ'ಯನ್ನು ಪ್ರಶ್ನಿಸುತ್ತಿದ್ದಾಳೆ. 
'ಬಿಚ್ಚ ಬಹುದು :
ಉಟ್ಟ ಸೀರೆಯನ್ನೂ
ಕಟ್ಟಿದ ಪೇಟವನ್ನೂ
ಬಿಚ್ಚಿ ತೋರಿಸಬಹುದೆ?
ತೋರಿಸಿ ಒಪ್ಪಿಸಬಹುದೆ?
ನಮ್ಮೆಲ್ಲ ಭೂತ -ವರ್ತಮಾನದ
ಸತ್ಯವನ್ನು ?

ನಡತೆ ಎಂಬುದು ಹೆಣ್ಣಿಗೆ ಮಾತ್ರ ಅತ್ಯಗತ್ಯ ಎಂಬ ಸಮಾಜದಲ್ಲಿ ಹುಟ್ಟಿದ ಸಾಲುಗಳು. ಅದಾವುದೋ ಅನುಮಾನದ ಬೆಂಕಿಯಲ್ಲಿ ಬೇಯುತ್ತಿರುವ ಹೆಣ್ಣಿನ ಈ ಪ್ರಶ್ನೆಗಳಿಗೆ ಉತ್ತರ ಇಂದಿಗೂ ಸಿಕ್ಕಿಲ್ಲ.   ಆದರೆ ದಬ್ಬೆಯವರ ಹೆಣ್ಣು  ಪ್ರಶ್ನೆಗಳಿಗೆ ಸೋಲಲಾರಳು,  ಸೀತೆಯ ದೃಢತೆಯೇ ಕಣ್ಣ ಬೆಳಕಾಗಿ ಬಂದು ಅವಳ ಮಲ್ಲಿಗೆಯಂತಾ ಮನಸಿಗೆ ವಜ್ರದ ಲೇಪ ಕೊಡಲಿ ಎಂದು ಆಶಿಸುತ್ತಾಳೆ. ಹಾಗೆ ಆಶಿಸುತ್ತಲೇ ಮತ್ತೆ ಮತ್ತೆ ಕೇಳುತ್ತಾಳೆ  ಈ ಶಿಕ್ಷೆ ಯಾಕಾಗಿ ?
ನಿಮ್ಮೆಲ್ಲರ ದೃಢತೆ
ಕಣ್ಣ ಬೆಳಕಾಗಿ ಬಂದು
ಈ ಮನದ ಮಲ್ಲಿಗೆಗೆ
ವಜ್ರಲೇಪವ ಬಳಿದು ಉಳಿಸಬೇಕು

ಇಂದಿಗೂ ಅನುಮಾನಕ್ಕೆ ಬಲಿಯಾಗುವ ಹೆಣ್ಣುಗಳ ಸಂಖ್ಯೆ ಕಡಿಮೆ ಏನಲ್ಲ. ಆದರೆ ನಾವೀಗ ಸೀತೆ , ಅಹಲ್ಯೆ , ದ್ರೌಪದಿಯರ ಹೆಸರಿನಲ್ಲಿ ಅವರ ಮೂಲಕ ಪ್ರಶ್ನೆ ಮಾಡುವ ಹಂತದಿಂದ ಮುಂದೆ ಸಾಗಿದ್ದೇವೆ, ಸಾಗಬೇಕು  ಎಂಬುದು ನನ್ನ ಅನಿಸಿಕೆ ಮತ್ತು ಆಶಯ. ಹೆಣ್ಣು ತನ್ನ ನೋವನ್ನು ಹಿಂದಿಗಿಂತ ಸ್ಪಷ್ಟವಾಗಿ ಅರುಹಬಲ್ಲಳು. ಕೆಲವು ಕೇಳುವ ಕಿವಿಗಳೂ ಇವೆ. ಮನದ ಮಲ್ಲಿಗೆಗೆ ವಜ್ರದ ಲೇಪ ಬಳಿಯುವ ದೃಢತೆಯಿಂದಾಗಿ ಈ ಕವಿತೆ ಆಪ್ತವಾಗುತ್ತದೆ .  ಈ ದೃಢತೆ ಸಾರ್ವಕಾಲಿಕ ಅಗತ್ಯ ಕೂಡ.

ಸಂಕಲನದ ಶೀರ್ಷಿಕೆಯಾದ 'ನೀರು ಲೋಹದ ಚಿಂತೆ' ಎಂಬುದು  ಎಂಟು ಸಾಲಿನ ಕವಿತೆ.  ಜೀವದ ಅಸ್ತಿತ್ವದ ಪ್ರಶ್ನೆಯನ್ನು ನೀರು ಮತ್ತು ಲೋಹದ ಮೂಲಕ ಕೇಳುವ ಕವಿತೆ.

ಈ ಸಂಕಲನದ ನನ್ನಿಷ್ಟದ ಸಾಲುಗಳು 'ನಿಸಿದಿ ನಾಡಿನ ಹಾಡು' ಎಂಬ ಹನಿಗವನದ್ದು :
ತೊರೆದಿದ್ದೇವೆ : ಬಟ್ಟೆಯ ಹಂಗು
ಸೂರ ಹೊಕ್ಕಿಲ್ಲ : ಹುಟ್ಟಿದ ಮೇಲೆ
ಸಲ್ಲೇಖನ : ನಿತ್ಯನೇಮ
ಇಷ್ಟೇ ವ್ಯತ್ಯಾಸ : ಆಯ್ಕೆ ನಮ್ಮದಲ್ಲ .

ಅತೀ ಕಡಿಮೆ ಪದಗಳಲ್ಲಿ ಎಲ್ಲವನ್ನೂ ಹೇಳಬಹುದೇ ? ಎಂಬ ಪ್ರಶ್ನೆಗೆ ಉತ್ತರ ಈ ಸಾಲುಗಳು. ನಾಲ್ಕು ಸಾಲಿನ ಬಗ್ಗೆ ಬರೆಯುತ್ತಲೇ ಇರಬಹುದು ಆದರೆ ಈ ಸಾಲುಗಳು ಒಳಗಿಳಿಯಲು ಬರಹದ ಅಗತ್ಯವಿಲ್ಲ .
ಬರೆದಂತೆ ಬದುಕಿದ  ಬದುಕನ್ನೇ ಬರಹವಾಗಿಸಿದ ಪ್ರಾಮಾಣಿಕತೆಯಿಂದಾಗಿ  , ಕೋಮಾದೊಡನೆ ಹೋರಾಡಿದ ನಂತರವೂ ಕವಿತೆ ಕಟ್ಟ ಬಯಸುವ ಜೀವನ್ಮುಖಿಯಾಗಿ ,  ಮಮತೆಯ ದನಿಯ ಸ್ತ್ರೀವಾದಿಯಾಗಿ ವಿಜಯ ದಬ್ಬೆ ಹೆಚ್ಚು ಆಪ್ತವಾಗುತ್ತಾರೆ , ಇಷ್ಟವಾಗುತ್ತಾರೆ. (ಸ್ತ್ರೀವಾದಿ ಎಂಬ ಪದದ ಬಗ್ಗೆ ನನ್ನದೇ ಆದ ಆಕ್ಷೇಪಣೆಗಳಿದ್ದರೂ ಅವರು ಹಾಗೆಯೇ ಗುರುತಿಸಿಕೊಂಡಿರುವುದರಿಂದ ನಾನೂ ಹಾಗೇ ಬಳಸಿದ್ದೇನೆ)  ಮುಂದೆ ಬರೆಯಲು ಮತ್ತೆ ಪದಗಳು ಸಿಗುವವರೆಗೆ ವಿಜಯ ದಬ್ಬೆಯವರಿಗೆ ಗೌರವ ಪೂರ್ವಕ ನಮಸ್ಕಾರಗಳು.

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ

1 comment:

  1. ವಿಜಯ ದಬ್ಬೆ ಅವರಂತಹ ಮಹಿಳೆಯರ ಹೋರಾಟದ ಫಲವಾಗಿ, ಹೆಣ್ಣುಮಕ್ಕಳು ಮೊದಲಿನಿಗಿಂತಲೂ ಇಂದು ಹೆಚ್ಚು ನಿರಾಳವಾಗಿದ್ದಾರೆ. ಅವರಿಗೆ ನನ್ನ ಪ್ರಣಾಮಗಳು.

    ReplyDelete