Thursday, January 24, 2013

ಕಥಾ ಸಮಯ - ೨

೧. ಪುಟ್ಟ ಹುಡುಗನೊಬ್ಬ ಚಿಟ್ಟೆಯೊಂದನ್ನ ಹಿಡಿದ. ಬಣ್ಣ ಬಣ್ಣದ ಮುದ್ದಾದ ರೆಕ್ಕೆ ಹುಡುಗನ ಬೆರಳ ಮಧ್ಯೆ ಒದ್ದಾಡುತಿತ್ತು.
ಹುಡುಗ ಚಿಟ್ಟೆಯನ್ನ ಬಂಧಿಸಲು ಬೆಂಕಿ ಪೊಟ್ಟಣಒಂದನ್ನ  ಹುಡುಕುತ್ತಿದ್ದ.  ಚಿಟ್ಟೆ ಹೇಳಿತು "ಹಾರಾಡದೇ ಬದುಕಿರಲಾರೆ
ಬಿಟ್ಟು ಬಿಡು ನನ್ನ. ನಿನ್ನ ಕಣ್ಣ ಮುಂದೆ ಹಾರಾಡಿ ಕೊಂಡಿರುತ್ತೇನೆ , ನೋಡಿ ಆನಂದಿಸು." ಹುಡುಗ ಕೇಳಲಿಲ್ಲ
ಬೆಂಕಿ ಕಡ್ಡಿಗಳ ಎಸೆದು ಖಾಲಿ ಡಬ್ಬದಲ್ಲಿ ಚಿಟ್ಟೆಯನ್ನಿಟ್ಟ. ದಿನವೂ ಚಿಟ್ಟೆಯ ಬಣ್ಣವ ನೋಡುವ ಕನಸ ಹೊತ್ತು ಮಲಗಿದ.
ಬೆಳಗೆದ್ದು ನೋಡಿದರೆ ಹೊರ ಹೋಗುವ ಪ್ರಯತ್ನದಲ್ಲಿ ಚಿಟ್ಟೆಯ ರೆಕ್ಕೆ ಪುಟ್ಟ ಡಬ್ಬದಲ್ಲಿ  ಚೆಲ್ಲಾ ಪಿಲ್ಲಿಯಾಗಿತ್ತು!

೨.  ಬದುಕಿಗೂ ರೇಖಾ ಗಣಿತಕ್ಕೂ ಹೋಲಿಕೆ ಇದೆಯೇ?  ಅವಳನ್ನ ಬಹುದಿನದಿಂದ ಕೊರೆಯುತ್ತಿದ್ದ ಪ್ರಶ್ನೆ.  ಹೆಚ್ಚು ಮುಕ್ಕಾಲು ಜನರ ಬದುಕು 'ವೃತ್ತ',  ಅದರ ಕೇಂದ್ರ ಬಿಂದು 'ನಾನು'!  'ನಾನು' ಚಂದವಿರಬೇಕು ,'ನಾನು' ಸಂತೋಷವಾಗಿರಬೇಕು,'ನನ್ನ' ಜನ ಹೊಗಳಬೇಕು, ಇತ್ಯಾದಿ ಇತ್ಯಾದಿ.ಒಟ್ಟಿನಲ್ಲಿ 'ನಾನು' ಇಂದ ಆರಂಭವಾಗಿ 'ನಾನು'ದಲ್ಲೇ  ಮುಗಿವ ವೃತ್ತ. ಅದರ ಸುತ್ತ ಎಲ್ಲ ಸುತ್ತುತ್ತಲೇ ಇರುತ್ತದೆ. ಕೊನೆ ಇಲ್ಲ ಮೊದಲಿಲ್ಲ."ಎತ್ತು ಗಾಣವ ಹೊತ್ತು ತಾ ನಿತ್ಯದಲಿ ಸುತ್ತಿ ಬಂದಂತೆ ಸರ್ವಜ್ಞ ".
 'ನಾನು' ಎಂಬ ಕೆಂದ್ರವನ್ನ ತೆಗೆದು ಬಿಟ್ಟರೆ, ವೃತ್ತ ಸರಳ ರೇಖೆಯಾಗುತ್ತದೆ, ಚಲಿಸುತ್ತದೆ, ಗಮ್ಯವನ್ನು ಸೇರುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಮುನ್ನಡೆಯುತ್ತದೆ. ಆದರೆ ಆ ಒಂದು ಬಿಂದುವನ್ನು ತೆಗೆಯುವುದು ಅದೆಷ್ಟು ಕಷ್ಟ  ?
"ಸರಳತೆಯಲ್ಲಿ ಸಂತೋಷದ ರಹಸ್ಯವಿದೆ ಆದರೆ ಸರಳತೆಯ ರಹಸ್ಯ ?"

೩. ಅಜ್ಜಿಯದೊಂದು ಪಂಚೆ ಅದಕ್ಕೆ ಸ್ನಾನದ ಪಂಚೆ ಅಂತ ಹೆಸರು. ಒಂದು ನಾಲ್ಕು ಮೊಳವಿದ್ದ ಬೆಳ್ಳನೆಯ ಬಟ್ಟೆ. ದಿನವೂ ಅಜ್ಜಿ ಬಚ್ಚಲಿಗೆ ಸ್ನಾನಕ್ಕೆ ಇಳಿದ ಕೂಡಲೇ  ಉಟ್ಟ  ಸೀರೆ ಬಿಚ್ಚಿ ಸ್ನಾನದ ಪಂಚೆ ಸುತ್ತುವುದು ರೂಡಿ.ಒಂದು ದಿನ ಮೊಮ್ಮಗಳು ಅಜ್ಜಿಯನ್ನ  ಕೇಳಿದಳು "ಅಜ್ಜಿ ಸ್ನಾನ ಮಾಡೋವಾಗ ಸ್ನಾನದ ಪಂಚೆ ಯಾಕ್ ಉಟ್ಕೊತ್ತಿ ?"
ಅಜ್ಜಿ ನಕ್ಕಳು "ಯಮುನಾ ತೀರದಲ್ಲಿ ಬಟ್ಟೆಗಳನಿಟ್ಟು  ಗೋಪಿಕೆಯರು  ಸ್ನಾನ ಮಾಡೋಕೆ ಇಳಿದಾಗ   ಕೃಷ್ಣ  ಬಟ್ಟೆಗಳನ್ನ ಕದ್ದೊಯ್ದಿದ್ದ , ಕಡೆಗೆ ಸತಾಯಿಸಿ ಕೊಟ್ಟ . ಅದಕ್ಕೆ ಸ್ನಾನ ಮಾಡೋವಾಗ ಸ್ನಾನದ ಪಂಚೆ ಇರ್ಬೇಕು"
"ಒಹ್ ! ಹಾಗ"  ಮೊಮ್ಮಗಳು ಮೌನವಾದಳು.
ಮೊಮ್ಮಗಳು ಸ್ವಲ್ಪ ಬೆಳೆದ ಮೇಲೆ ಅಂದು ಕೊಂಡಳು "ಬಟ್ಟೆಯ ವ್ಯಾಮೋಹ ಬೇಡ ನನ್ನ ಮುಂದೆ ಅಂತ ಹೇಳ ಹೊರಟಿದ್ದನೇ  ಕೃಷ್ಣ ? ಸೀರೆಯ ಮೋಹ ಬಿಟ್ಟು ಸ್ನಾನದ ಪಂಚೆಗೆ ಮೊರೆ ಹೋಗಿದ್ದೇಕೆ ?ಮೂರುಲೋಕವನ್ನ ಹೊತ್ತವನ ಮುಂದೆ ದೇಹದ ಹಂಗೇಕೆ ?"

೪.   ಸಿಪ್ಪೆಯ ಒಳಗಿದ್ದ  ಒಂದು ಕಾಳು  ಇನ್ನೊಂದಕ್ಕೆ ಹೇಳಿತು,  "ಒಂದೇ ಮಣ್ಣಲ್ಲಿ  ಹುಟ್ಟಿ, ಅದೇ ಸೂರ್ಯನ ಕೆಳಗೆ ಬೆಳೆದು,   ಜೊತೆಗೇ   ಬದುಕಿದರೂ  ಬೇಯುವ ಮುನ್ನ ನನ್ನ ನಿನ್ನ ಮಿಲನವಾಗದು ".  ಕಾಳು ಸುಲಿಯುತ್ತಿದ್ದ  ಅವಳಿಗೆ  ಮತ್ತೆ 'ಅವನ' ನೆನಪಾಯಿತು 

10 comments:

  1. ೧. ಕುತೂಹಲದ ಘಟ್ಟ ಜಾರಿ ಹೋದಾಗ ರೆಕ್ಕೆಗಳು ತನ್ನಷ್ಟಕ್ಕೆ ತಾನೇ ಮುದುಡಿ ನಮ್ಮನ್ನು ಕೊಳ್ಳುತ್ತದೆ
    ೨. ಸರಳ ಜೀವನ ಗೆರೆಯ ಮರೆಯಲ್ಲಿ ಮೆರೆದಾಗ ಮಾತ್ರ ನಾನು ಎನ್ನುವ ಭಾವ ಹೋಗಿ ಜೀವನ ಸುಂದರವನವಾಗುತ್ತದೆ
    ೩.ನನ್ನದೇನಿಲ್ಲ ನೀನೆ ಗತಿ ಎಂದಾಗ ಕಾಯುವ ದೇವ ನೆರಳಾಗಿ ನಮ್ಮ ರಕ್ಷಣೆಗೆ ನಿಲ್ಲುತ್ತಾನೆ...
    ೪. ಜೀವನದಲ್ಲಿ ಕಷ್ಟಗಳ ಜೊತೆ ಬೆಂದಾಗ ಮಾತ್ರ ಜೀವನ ಪರಿಧಿ ಅರ್ಥವಾಗುವುದು

    ಈ ನಾಲ್ಕು ಕಥೆಗಳು ಹೊರಡಿಸುವ ಭಾವ ಅನನ್ಯ...ಸುಂದರ ಪುಟ್ಟ ಪುಟ್ಟ ಕಥೆಗಳು ಮೇಡಂ

    ReplyDelete
    Replies
    1. ಸೊಗಸಾಗಿ ಪ್ರತಿಕ್ರಿಯೆಯನ್ನು ದಾಖಲಿಸುವ ನಿಮ್ಮ ತಾಳ್ಮೆಗೆ ಶರಣು
      ಧನ್ಯವಾದಗಳು

      Delete
  2. ಪುಟ್ಟ ಪರಿಚ್ಛೇದಗಳಲ್ಲಿ ಬದುಕಿನ ಸಂದೇಶವನ್ನು ಸೊಗಸಾಗಿ ಹೇಳಿದ್ದೀರಿ.ಝೆನ್ ಕತೆಗಳು ನೆನಪಾಗುತ್ತವೆ.

    ReplyDelete
    Replies
    1. ನಿಮ್ಮ ತಿಳುವಳಿಕೆಯ ಕಾರಣ ನಿಮಗೆ ಈ ಸಾಲುಗಳು ಝೆನ್ ಕಥೆಗಳನ್ನ ಜ್ಞಾಪಿಸಿರಬಹುದು :)
      ಈ ಪುಟ್ಟ ಪ್ರಯತ್ನವನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು ಕಾಕಾ

      Delete
  3. ಚುಟುಕು-ಗುಟುಕು!! ಅರ್ಥವತ್ತಾಗಿವೆ, ಧನ್ಯವಾದ.

    ReplyDelete
  4. ಮಕ್ಕಳಾಗಿನ ಬಾಲ್ಯವಸ್ತೆ ಕುತೂಹಲ ಕೌತುಕಗಳಿಗೆ ಹಾಗೆ ಮಾಡಿದ್ರೂ, ಈಗ ಅನ್ಸುತ್ತೆ ..ಪಾಪ ಅವುಗಳಿಗೆ ಹಾಗೆ ಮಾಡಬಾರದಿತ್ತು ಎನಿಸುತ್ತಿದೆ... ಚಂದ ಲೇಖನ

    ReplyDelete
  5. uttamavaada sandeshavannu saaruva
    nimma uttama kathegaligaagi dhanyavaadagalu.

    ReplyDelete
    Replies
    1. ಧನ್ಯವಾದಗಳು,ಇಲ್ಲಿಗೆ ಸ್ವಾಗತ

      Delete