Thursday, August 15, 2013

ಭೀಮಸೇನ ಗಾಥಾ


ಇದು ಪುಸ್ತಕದ ವಿಮರ್ಶೆ ಖಂಡಿತಾ ಅಲ್ಲ.ಇಲ್ಲಿ ಬರೆದದ್ದು ನನ್ನನ್ನು ಹೆಚ್ಚು ಓದಿಗೆ,ಇದೇ ಪುಸ್ತಕದ ಮರು ಓದಿಗೆ ಪ್ರೇರೇಪಿಸಲೆಂದು ಈ ಬರಹ. 

ಬೀಚಿಯವರ ಭಯಾಗ್ರಫಿಯ  ಬಗ್ಗೆ ಸಾಕಷ್ಟು ಕೇಳಿದ್ದೆ. ಕೆಲ ತಿಂಗಳುಗಳ ಹಿಂದೆ ಅಂಕಿತಾ ಪುಸ್ತಕಾಲಯಕ್ಕೆ ಹೋದಾಗ ಕಣ್ಣಿಗೆ ಬಿತ್ತು.  ನನಗೆ ರಟ್ಟಿನ ಬೈಂಡ್ ಮಾಡಿ, ಓದು ನಿಲ್ಲಿಸಿದ ಪುಟವನ್ನು  ಮಾರ್ಕ್  ಮಾಡಲು ಒಂದು ದಾರ  ಕೊಟ್ಟ ಪುಸ್ತಕಗಳ ಆಕರ್ಷಣೆ ಹೆಚ್ಚು. ಭಯಾಗ್ರಫಿಗೆ  ರಟ್ಟಿನ ಬೈಂಡ್ ಮಾಡಿದ್ರು. ಭಯಾಗ್ರಫಿ,  ಮೂಕಧಾತು ಇನ್ನೂ ಕೆಲ ಪುಸ್ತಕಗಳನ್ನು ಕೊಂಡೆವು. ಮೊದಲು ಎತ್ತಿಕೊಂಡದ್ದು ಮೂಕಧಾತು.

ಆತ್ಮಕಥೆಗಳನ್ನ ನಾನಷ್ಟಾಗಿ ಓದಿಲ್ಲ. ಭಯಾಗ್ರಫಿಯನ್ನ ಓದಲು ಕೆಲದಿನ ಮನಸು ಮಾಡಲಿಲ್ಲ, ಆದರೆ ಒಮ್ಮೆ ಕೈಗೆತ್ತಿಕೊಂಡ ಮೇಲೆ ಒಗ್ಗರಣೆಗೆ ಎಣ್ಣೆ ಕಾಯುವಷ್ಟರಲ್ಲಿ ಒಂದು ಪುಟ ಓದಿ ಬಿಡುವ ಎನ್ನುವ ಕುತೂಹಲದೊಂದಿಗೆ ಓದಿದೆ. ಬೀಚಿಯವರ  ತಿಮ್ಮನನ್ನು ಅಲ್ಲಿ ಇಲ್ಲಿ ಓದಿದ್ದು ಬಿಟ್ಟರೆ ನಾನು ಅವರ ಯಾವುದೇ  ಪುಸ್ತಕ ಓದಿಲ್ಲ. ಹಾಸ್ಯ ಸಾಹಿತ್ಯವನ್ನಂತೂ ಓದಿದ್ದು ತೀರ ಕಡಿಮೆ. ಪಿ .ಜಿ. ವುಡ್ಹೌಸ್ ನನ್ನು   ತಂಗಿ ಬಾಯಿ ಚಪ್ಪರಿಸಿ ಓದುತ್ತಿದ್ದರೆ ಅದ್ಹೇಗೆ ನಗೆ ಸಾಹಿತ್ಯವನ್ನ ಓದಬಹುದು? ಅಂತ ನನಗೆ ನಾನೇ  ನಿರ್ಧರಿಸಿ ಆ  ಪುಸ್ತಕ ಗಳನ್ನ ಓದಲೇ ಇಲ್ಲ. ನನಗಿರುವ ಇಂಗ್ಲಿಷಿನ ಜ್ಞಾನವೂ ಇದಕ್ಕೆ ಕಾರಣವಾಗಿರಬಹುದು. ಸುನಂದಮ್ಮನವರ ಕೆಲ ಬರಹಗಳನ್ನ ಸ್ಕೂಲ್ನಲ್ಲಿದ್ದಾಗ ವಿಶೇಷಾಂಕಗಳಲ್ಲಿ ಓದಿದ ನೆನಪು . ಇತ್ತೀಚಿಗೆ ಭುವನೇಶ್ವರಿ ಹೆಗಡೆಯವರ ಬರಹಗಳನ್ನ ಓದಿದ್ದೇನೆ. ಕೊಂಕಣವನ್ನ ಸುತ್ತಿದ್ದಾಯಿತು , ಇನ್ನು ಮೈಲಾರಕ್ಕೆ ಬರುತ್ತೇನೆ.

ಭಯಾಗ್ರಫಿಯ ಮೊದಲ ಕೆಲ ಪುಟಗಳಲ್ಲಿ ಹುಟ್ಟಿದ ಕೂಡಲೇ ತಂದೆಯನ್ನು ಕಳೆದುಕೊಂಡು  ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿದ ಮಗುವಿನ ಪಾಡಿದೆ, ಅದನ್ನ ಓದಿ ಮನಸು ಕಲಕಿ ಹೋಗಿತ್ತು.  ಲೋಕವನ್ನು ನಗಿಸುವವನ ಕಂಬನಿಯೂ ದೊಡ್ಡದು ಅಂತ ಮತ್ತೆ ಸಾಬೀತಾಗಿತ್ತು. ಮಗು ಹುಟ್ಟಿದ ಕೂಡಲೇ ತಂದೆ ಸತ್ತನೆಂಬ ಕಾರಣಕ್ಕೆ ಮಗು ಹಾಲಿಲ್ಲದೆ ಸಾಯಲಿ ಎಂಬ ಕ್ರೌರ್ಯದ ಅನಾವರಣ, ಅದೂ ಮೊದಲ ಹತ್ತು ಪುಟ ಮೀರುವ ಮೊದಲೇ. ಕಟು ವಾಸ್ತವಿಕತೆಗೆ ಅತೀ ಹತ್ತಿರವಾದ ಸಿನೆಮಾ ನೋಡುವುದು ಪುಸ್ತಕ ಓದುವುದು ನನ್ನ್ನಿಂದಾಗದು. ಭಯಾಗ್ರಫಿಯನ್ನ ಮುಂದೆ ಓದಬೇಕೆ ? ಎಂಬ ಪ್ರಶ್ನೆ ಎದುರಾಗಿದ್ದು ನಿಜ.

 ಬುಧ್ಧಿ ಬರುವಷ್ಟರಲ್ಲಿ ಕೆಂಪು  ಮಡಿಯನುಟ್ಟು, ಸದಾಕಾಲ ತಲೆಯ ಮೇಲೆ ಸೆರಗು ಹೊದ್ದುಕೊಳ್ಳುವ ಮಡಿ ಹೆಂಗಸಾದ ತಾಯಿಯನ್ನ ಕಂಡ  ಬೀಚಿ, ತಾಯಿ ಎಂದರೆ ಹೀಗೆ ಇರುತ್ತಾಳೇನೋ ಅಂದುಕೊಂಡಿದ್ದೆ ಎಂದು ಬರೆಯುತ್ತಾರೆ. ವಿಧವೆಯಾಗಿಯೂ ಸಕೇಶಿಯಾಗಿದ್ದ  ಇಂದಿರಾ ಗಾಂಧಿಯವರನ್ನು ಕಂಡು, ಕನಿಷ್ಠ ಕೂದಲಿದ್ದ ನನ್ನ ತಾಯಿಯನ್ನು ನಾನು ಕಾಣುವುದಕ್ಕಾದರೂ   ನನ್ನ ತಾಯಿಯೂ ಪ್ರಧಾನ ಮಂತ್ರಿಯಾಗಿರಬೇಕಿತ್ತೆಂದು  ಹೇಳುವಾಗಿನ  ವಿಡಂಬನೆ ಮನ ಕಲಕುತ್ತದೆ.  ಅವರ ಬಾಲ್ಯ, ಮಗ ಸತ್ತದ್ದು, ಹೆಂಡತಿಯ ಆರೋಗ್ಯ ಸರಿ ಇಲ್ಲದಾಗ ಅವರು ಪಟ್ಟ ಪಾಡು ಕಣ್ಣ ಮುಂದೆ ಕಟ್ಟಿಕೊಳ್ಳುತ್ತವೆ.  ಹರಪನಹಳ್ಳಿಯ ಚಿತ್ರಣ ನಮ್ಮೆದುರಿಗೆ ಸಶಕ್ತವಾಗಿ ಮೂಡುತ್ತದೆ.

ಬ್ರಾಹ್ಮಣರೂ ಲಿಂಗಾಯತರು ಸೇರಿ ಶಾಲೆಯಲ್ಲಿಟ್ಟಿದ್ದ  ಗಣಪನಿಗೆ ,  ಬ್ರಾಹ್ಮಣರು ಜನಿವಾರ ಹಾಕಬೇಕು ಅಂದರೆ, ಲಿಂಗಾಯತರು ಶಿವದಾರ ಹಾಕಬೇಕು ಅನ್ನುತ್ತಾರೆ. ಬೀಚಿ ಮುಸಲ್ಮಾನರೂ  ಗಣಪನ ಕೂರಿಸಲು ದುಡ್ಡು ಕೊಟ್ಟಿರುವ ಕಾರಣ ಈ ಸರ್ತಿ ಗಣಪನಿಗೆ ಅವರ ರಿವಾಜನ್ನು ಅನುಸರಿಸೋಣ ಅನ್ನುತ್ತಾರೆ. ಈ ಪ್ರಸಂಗ ನಗಿಸುವುದರಲ್ಲಿ ಸಂದೇಹವಿಲ್ಲ


ತನ್ನ ಬದುಕನ್ನು ಕಂಡ  ಸಾಕ್ಷಿಯಾಗಿ ಬೀಚಿ ತಮ್ಮ ಬದುಕನ್ನ  ಓದುಗರ ಮುಂದೆ ತೆರೆದಿಟ್ಟಿರುವುದು ಪುಸ್ತಕ ಇಷ್ಟವಾಗುವ ಕಾರಣಗಳಲ್ಲೊಂದಿರಬಹದು. ಇದನ್ನ ಓದುವಾಗ  ಎಷ್ಟೋ ಕಡೆ ನನಗೆ ಕನ್ನಡದ ಇಂದಿನ ಪ್ರಖ್ಯಾತ ಬರಹಗಾರರೊಬ್ಬರ ನೆನಪಾಯಿತು.  ಅವರು ಬೀಚಿಯವರನ್ನ ಅನುಸರಿಸಿದರೋ  ಅಥವಾ ಹಾಗೆ ಬರೆಯುವುದು ಒಂದು ಸಾಹಿತ್ಯದ ಪ್ರಕಾರವೋ, ಅಂತ ಹೇಳುವಷ್ಟು ಸಾಹಿತ್ಯ ನನಗೆ ಗೊತ್ತಿಲ್ಲ . ದೇವರಿಲ್ಲದ ಗುಡಿ ಮತ್ತು  ಮಾತನಾಡುವ ದೇವರುಗಳು ಕೂಡ ಅವರ ಆತ್ಮ ಕಥೆ ಅಂತ ಅವರೇ ಕೊನೆಗೆ ಬರೆದಿದ್ದಾರೆ, ಅವುಗಳನ್ನು ನಾನಿನ್ನೂ ಓದಬೇಕಿದೆ

ಈ ಪುಸ್ತಕದ ಬಗ್ಗೆ ಇನ್ನೊಂದು ಘಟನೆ ಎಂದರೆ , ನಾವು ತಂದ ಪುಸ್ತಕದಲ್ಲಿ  ಕೊನೆಯ 10 ಪುಟಗಳು ಇರಲಿಲ್ಲ. ಕೆಲವು ಪುಟಗಳು ಎರಡು ಬಾರಿ  ಮುದ್ರಣಗೊಂಡಿದ್ದವು  225ರೂ ನ ಪುಸ್ತಕ ಬದಲಾಯಿಸಲು ನಾವು 400ರೂ ಪೆಟ್ರೋಲ್ ಹಾಕಿ ಅಂಕಿತಾಗೆ ಹೋಗಿ ಮತ್ತೊಂದಿಷ್ಟು   ಪುಸ್ತಕ ತಂದೆವು !

ಪುಸ್ತಕದ ಕೊನೆಯಲ್ಲಿರುವ ಒಂದು ಕಗ್ಗ :

ಕತ್ತಲೆಯೋಳೇನನೋ  ಕಂಡು ಬೆದರಿದ ನಾಯಿ
ಎತ್ತಲೋ  ಸಖನೊರ್ವನಿಹನೆಂದು ನಂಬಿ
ಕತ್ತೆತ್ತಿ  ಮೋಳಿಡುತ್ತ  ಬೊಗಳಿ ಹಾರಾಡುವುದು
ಭಕ್ತಿಯಂತೆಯೆ  ನಮದು ಮಂಕುತಿಮ್ಮ

ಮಂಕುತಿಮ್ಮ ಹೇಳದೇ ಬಿಟ್ಟ ವಿಷಯವೇನಾದರೂ ಇದೆಯಾ ? ಎಂಬುದು ನನಗೀಗ ದೊಡ್ಡ ಪ್ರಶ್ನೆ.


ಪ್ರಕೃತಿ ನೀಡಿದ ಅತ್ಯುತ್ತಮ ಕೊಡುಗೆ ಸ್ವಾತಂತ್ರ್ಯ. ಅಸಂಖ್ಯಾತ ಹೋರಾಟಗಾರರ ಋಣ ಹೊತ್ತು ಬದುಕುತ್ತಿರುವ ನಾವು ಸ್ವಾತಂತ್ರ್ಯದ ಸದುಪಯೋಗ ಮಾಡುವುದರಿಂದ ಕೊಂಚವಾದರೂ ಋಣಸಂದಾಯವಾಗಬಹುದು.

10 comments:

  1. ಸ್ವರ್ಣಾ,
    ಬೀchi ಬಹಳ ದೊಡ್ಡ ಲೇಖಕರು. ಅವರ ಭಯಾಗ್ರಫಿ ತುಂಬ ಚೆನ್ನಾಗಿದೆ. ಅವರ ಪುಸ್ತಕಗಳಲ್ಲಿ ನಾನು ಅತಿಯಾಗಿ ಮೆಚ್ಚಿಕೊಂಡದ್ದು:‘ಖಾದಿ ಸೀರೆ.’ ‘ಸುಧಾ’ ವಾರಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದಂತಹ ‘ಉತ್ತರಭೂಪ’ದಲ್ಲಿಯ ಹಾಸ್ಯ, ವ್ಯಂಗ್ಯ ಹಾಗು ಕನಿಕರ ಇವುಗಳ ಸಮರಸ ಪಾಕ ಉತ್ಕೃಷ್ಟವಾದದ್ದು.
    ಅವರ ಬಗೆಗೆ ನೀವು ಬರೆದದ್ದು ಖುಶಿಯನ್ನು ತಂದಿದೆ.

    ReplyDelete
  2. ನಿಜವಾಗಲೂ ಹೇಳಬೇಕಾದರೆ ನನಗೆ ಯಾವತ್ತಿಗೂ ಅಚ್ಚರಿ ಎನಿಸುವುದು ಬೀchi ಅವರ ಬರಹದ ಶೈಲಿ, ಹೂರಣ ಮತ್ತು ಆ ನೇರವಂತಿಕೆ.

    ಸದರಿ ಭಯಾಗ್ರಫಿಯನ್ನ ನಾನು ಹಲವು ಬಾರಿ ಓದಿದ್ದೇನೆ.

    ಧನ್ಯವಾದಗಳು ಜ್ಞಾಪಿಸಿದ್ದಕ್ಕೆ ಮೇಡಂ.

    ReplyDelete
  3. ಬೀಚಿಯವರನ್ನ ಅಷ್ಟಾಗಿ ಓದಿಲ್ಲ. ತಿಳಿದಷ್ಟನ್ನು ಬರೆದೆ , ಎಂದಿನಂತೆ ಪ್ರೋತ್ಸಾಹಿಸಿದ ಕಾಕಾ ಮತ್ತು ಬದರಿ ಸರ್ ಅವರಿಗೆ ವಂದನೆಗಳು

    ReplyDelete
  4. ಅವರು ಎಲ್ಲರನ್ನೂ ಅನುಭವಿಸಿ ಬರೆದವರು.. ಈ ಸಂವಹನ ಮಾಧ್ಯಮಗಳಿಲ್ಲದಿರುವಾಗಲೂ ಅತ್ಯಂತ ಪ್ರಸಿದ್ಧಿ ಪಡೆಯುವುದು ಒಳ್ಳೆಯ ಸಾಹಿತ್ಯದಿಂದ ಮಾತ್ರ ಸಾಧ್ಯ.

    ReplyDelete
  5. naanu khanDita idannu odabeku... thank you Swarna madam idara bagge baredaddakke..

    ReplyDelete
  6. ಸರಿಯಾಗಿ ಹೇಳಿದಿರಿ ಭಟ್ಟರೇ .
    ಪ್ರತಿಕ್ರಿಯೆಗಾಗಿ ವಂದನೆಗಳು
    ಖಂಡಿತಾ ಓದಿ ಮೊಗೆರ ಸರ್, ಒಂದು ಹೊಸ ಕಥೆ ಹೊಳೆಯಬಹುದು

    ReplyDelete
  7. ನಾನು ಇದನ್ನು ಓದಿದ್ದೇನೆ. ನಿಮ್ಮ ಬರಹ ಇನ್ನೊಮ್ಮೆ ಓದುವಂತೆ ಪ್ರೇರೇಪಿಸುತ್ತಿದೆ.

    ReplyDelete
  8. ಬರೆದದ್ದು ಸಾರ್ಥಕವಾಯಿತು ರಂಜಿತಾ . ನಿಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು

    ReplyDelete
  9. ನಿಮ್ಮ ಲೇಖನ ನನಗೂ ಈ ಪುಸ್ತಕ ಓದುವಂತೆ ಪ್ರೇರೆಪಿಸಿತು. ಪುಸ್ತಕ ತೆಗೆದುಕೊಂಡಿದ್ದೇನೆ.

    ReplyDelete
  10. ಖಂಡಿತಾ ಓದಿ. ಇಲ್ಲಿಗೆ ಸ್ವಾಗತ ಮತ್ತು ಧನ್ಯವಾದಗಳು.

    ReplyDelete