Thursday, August 29, 2013

ಮಲಗೆದ್ದವಳು



ಚಿತ್ರಕೃಪೆ : http://www.cianellistudios.com/abstract_paintings.html


ಇತ್ತೀಚಿಗೆ  ಸಲ್ಲಾಪದ ಸುನಾಥ್ ಕಾಕ ಯೇಟ್ಸ್ ಕವಿಯ ಕವಿತೆಯೊಂದರ ಮೂರು ಅನುವಾದಗಳ ಬಗ್ಗೆ ಬರೆದಿದ್ದರು. ಯೇಟ್ಸ್ ನನ್ನು ಅನುವಾದಿಸುವ  ದುಸ್ಸಾಹಸಕ್ಕೆ ನಾನು ಕೈ ಹಾಕಲಾರೆ. ಕೆಳಗಿರುವ  ಆ ಕವಿತೆಯ ಸಾಲು ನನಗೆ  ಬಹಳ ಇಷ್ಟ ಆಯಿತು.
For nothing can be sole or whole
That has not been rent
ಸಾಲಿನ ಮತ್ತು ಬರಹದ ಪ್ರಭಾವದಿಂದ ಕೆಳಗಿನ ಸಾಲುಗಳು ಮೂಡಿದವು . 

ಅಸಂಖ್ಯಾತ ರಾತ್ರಿಗಳನ್ನು ನಿದ್ದೆ ಇಲ್ಲದೆ
ಹಲವು ತೆಕ್ಕೆಗಳಲಿ ಕಳೆದ
ಅವಳಿಗೆ ರೆಪ್ಪೆಗಳ ಜೋಡಿಸುವುದು ಮರೆತು ಹೋಗಿದೆ
ಜೋಲುವ ಮೊಲೆಗಳು , ಗುಳಿಬಿದ್ದ ಕಂಗಳಲಿ
ದೇಹ ಸೌಂದರ್ಯ ಹೂತು ಹೋಗಿ ಬಹುಕಾಲವಾಗಿದೆ
ನಿದ್ರಿಸದ ಅವಳಿನ್ನು ಹೆಚ್ಚು ಕಾಲ ಬಾಳಳೆಂದು
ಊರಿಗೂರೇ  ಪಿಸುಗುಡುತ್ತಿದೆ
ಅಸಲಿಗೆ,  ಬಾಳುವವರು ನಿದ್ರಿಸುವರೇ ಅಲ್ಲವೇ ?

ಮೊನ್ನೆ ಒಂದು ದಿನ ಮಠದ ಗುರುಗಳು
ಶಾಂತ ಸರೋವರದ ಸೋಪಾನದ ಮೇಲೆಅವಳನ್ನು  ಭೇಟಿಯಾದರಂತೆ
"ಇನ್ನೆಷ್ಟು ದಿನ ಈ ಬದುಕು , ಈಗಲಾದರೂ ಅವನ ಸೇವೆಗೆ ಬಾ "  ಎಂದರಂತೆ
"ಇಷ್ಟು ದಿನ ಅವನಿಟ್ಟಂತೆ ಇದ್ದು ಅವನನ್ನು ಸೇವಿಸಲಿಲ್ಲವೇ ನಾನು ,
ನನಗೆ ನಿದ್ರಿಸುವ ಪರಿಯ ಕಲಿಸುವಿರೇನು ?" ಅವಳು ನಕ್ಕು ನುಡಿದಳಂತೆ
ಅಸಲಿಗೆ,  ರೆಪ್ಪೆ ಮುಚ್ಚದ ಮಾತ್ರಕ್ಕೆ  ಎಚ್ಚರವೇ ?

 ಗುರುಗಳು ಮೌನದಲ್ಲಿ ಸೋಪಾನಗಳನಿಳಿದರಂತೆ
  ಶುಧ್ಧರಾಗಿ  ಸೋಪಾನಗಳನೇರಿ ಬಂದು ಇಂತೆಂದರಂತೆ
"ಮಗಳೇ , ಎಚ್ಚರಗೊಂಡ  ನೀನು ಮತ್ತೆ ನಿದ್ರೆಯ ಬಯಸದಿರು
ಉಸಿರವನದೆ ಎಂಬುದರಿವಾದ ಬಳಿಕ ನಿದ್ರಿಸದಿರು "
ಸೋತ ಕಾಲನ್ನು ಎಳೆಯುತ್ತಾ ನಿಧಾನವಾಗಿ ಸೋಪಾನಗಳನೇರಿ
ಬಯಲ ಸೇರಿದ ಅವಳು
ಅಂದು ರಾತ್ರಿ ಹಾಯಾಗಿ ರೆಪ್ಪೆ ಮುಚ್ಚಿದವಳು ಮತ್ತೆ ಏಳಲಿಲ್ಲ
ಅಸಲಿಗೆ, ಎಚ್ಚರಗೊಂಡವರಿಗೆ ಲೋಕದ ಹಂಗೇಕೆ ?

ಇದನ್ನ ಬರೆಯೋವಾಗ ಹಿಂದಿಂದ   ಹಿಂದೋಳದಲ್ಲಿ  ಬಾಲಮುರಳಿಯವರ  'ನೀರಜಾಕ್ಷಿ   ಕಾಮಾಕ್ಷಿ....' ತೇಲಿಬರುತ್ತಿತ್ತು . ಹಾಡನ್ನ ಇಲ್ಲಿ ಕೇಳಬಹುದು 'http://mio.to/#/album/10-Classical_Carnatic_Vocal/23426- Dikshitar_Krithis_2/'

14 comments:

  1. ಸ್ವರ್ಣಾ,
    ಯೇಟ್ಸರ ಕವನಕ್ಕೆ ನೀವು ಬರೆದ alternate ಕವನವನ್ನು ಓದಿ ನನ್ನ ಸಂತೋಷ ಮುಗಿಲು ಮುಟ್ಟಿದೆ. ಮೊದಲಿನ ಎರಡು ನುಡಿಗಳು ಯೇಟ್ಸ-ಕವನದ ಭಾವಕ್ಕೆ ಹತ್ತಿರವಾಗಿದ್ದು, ಕೊನೆಯ ನುಡಿಯಲ್ಲಿ, ನೀವು ಬೇರೊಂದು ತಿರುವನ್ನೇ ಕೊಟ್ಟಿದ್ದೀರಿ. ಇಂತಹ alternate ಕವನಗಳನ್ನು ನಾನು ಬೇಂದ್ರೆಯವರಲ್ಲಿ ಕಂಡಿದ್ದೇನೆ. ಉದಾಹರಣೆಗೆ ಶೇಕ್ಸಪಿಯರನ ಈ ಕವನವನ್ನು ನೋಡಿ:
    Under the greenwood tree
    Who wants to lie with me
    Come hither, come hither, come hither.
    Here shall he see
    No enemy
    But winter and rough weather.
    ಈ ಕವನಕ್ಕೆ ಬೇಂದ್ರೆಯವರ alternate ಕವನ ಹಿಗಿದೆ;
    ಚಳಿ ಇರಲಿ, ಮಳೆ ಬರಲಿ,
    ಬಿಸಿಲು ಕುದಿಸುತಲಿರಲಿ,ಮಂಜು ಸುರಿಯುತಲಿರಲಿ,
    ಮುಮ್ಮುಖದ ಋತುಮಾನ ಹೇಗು ಇರಲಿ,
    ನಗುತ ಒಲಿವೆವು ನಾವು
    ನಗುತ ಒಲಿಸುವೆವು.

    ನಿಮ್ಮ ಕವನವನ್ನು ಮತ್ತೆ ಮತ್ತೆ ಮೆಚ್ಚುತ್ತ ಹಾಗು ಸಂತೋಷಪಡುತ್ತ,
    -ಕಾಕಾ

    ReplyDelete
  2. ಸ್ವರ್ಣಾ,
    ಈ ಕವನದ ಶೀರ್ಷಿಕೆಯಲ್ಲಿರುವ ಶ್ಲೇಷೆಯನ್ನು ಉಲ್ಲೇಖಿಸಲು ಮರೆತಿದ್ದೆ. ಅದಕ್ಕಾಗಿ ಮತ್ತೊಮ್ಮೆ commentಉ.

    ReplyDelete
  3. ಮೊದಲು ನನಗೆ ಈ ಪೊಸ್ತಿನ ವೈಶಿಷ್ಯ ಅನಿಸಿದ್ದು ಇದರ ಮೂರು ಆಯಾಮಗಳಿಂದ.

    1. ಸುನಾಥ್ ಅವರು ಬಲು ಅಕ್ಕರೆಯಿಂದ ಕ್ರೋಢೀಕರಿಸಿಕೊಟ್ಟ ಎಟ್ಸ್ ಕವಿಯ ಕವಿತೆಯ ಮೂರು ಅನುವಾದಗಳು.
    2. ಸಾಲುಗಳ ಪ್ರೇರೇಪಣೆಯಿಂದ ಬರೆಸಿಕೊಂಡ ನಿಮ್ಮ ಈ ಕವನ.
    3. ನನ್ನ ಹೃದಯ ಸಿಂಹಾಸನಾಧೀಶ್ವರ ಬಾಲಮುರಳಿ ಮತ್ತು ಮುತ್ತುಸ್ವಾಮಿ ಧೀಕ್ಷಿತರ ಈ ಕೃತಿ.

    (ಪುಷ್ಕಳ ಭೋಜನ ಅನುಗ್ರಹಿಸಿದ ಸ್ವರ್ಣಾಜಿ 4ನೇ ಆಯಾಮ! ;) )

    ಒಂದು ಸತ್ಯವನ್ನು ಇಲ್ಲಿ ವಿವರಿಸುತ್ತಾ ಹೋದ ರೀತಿ ನಮ್ಮನ್ನು ಮ್ಲಾನವಾಗಿಸುತ್ತದೆ. ನಿಮ್ಮ ಮಾತಿನಂತೆ ಎಚ್ಚರದ ಮನಸ್ಸು ಬೇಗ ಕೈಲಾಸವಾಸವಾದರೆ, ನಿದ್ರಿಸುತಾ ಕಳೆಯುವ ಲೋಕ 'ತಾವರೆಗಳು' ಬಾಳುವರು ಬಹುಕಾಲ.

    ಧ್ಯಾನಾಸಕ್ತ ಮನಸ್ಸಿಗೆ ಹೊರ ಕಣ್ಣ ರೆಪ್ಪೆ ಮುಚ್ಚಿದರೆ ಅಥವಾ ಮುಚ್ಚದಿರೆ ವ್ಯತ್ಯಾಸವೇ ಆಗಬಾರದು. ಎಕೆಂದರೆ ಸಂತೆಯಲಿದ್ದರೂ ಏಕಾಂತ ಕಲ್ಪಿಸಿಕೊಳ್ಳುವ ಉಪಾಯ ಸಿದ್ದಿಸಿಕೊಳ್ಳಬೇಕು.

    ಈ 'ಮಲಗೆದ್ದವಳು' ನಮ್ಮ ಮಲಗಿದ ನಿಯತ್ತನ್ನು ಇನ್ನಾದರೂ ಜಾಗೃತಗೊಳಿಸಿ, 'ಉಸಿರವನದೆ ಎಂಬುದರಿವಾಗಲಿ' ಶೀಘ್ರವಾಗಿ.

    ReplyDelete
  4. ಮೊದಲಿಗೆ ಕಾಕಾ ಮತ್ತು ಬದರಿ ಸರ್ ಈ ಬ್ಲಾಗಿನ ಎಲ್ಲ ಪೋಸ್ಟುಗಳಿಗೂ ತಪ್ಪದೆ ಪ್ರೋತ್ಸಾಹಿಸಿ
    ಪ್ರತಿಕ್ರಿಯಿಸುವ ನಿಮ್ಮ ಪ್ರೀತಿಗೆ ಧನ್ಯವಾದಗಳು ಮತ್ತು ವಂದನೆಗಳು. ನಿಮ್ಮ ಪ್ರೀತಿಯೇ ಈ ಸಾಲುಗಳು ನಿಮಗೆ ಇಷ್ಟೊಂದು ಮುದ ಕೊಡಲು ಕಾರಣ .
    ಕಾಕಾ , ಬೇಂದ್ರೆ ಅಜ್ಜನೆಂಬ ಹಣ್ಣನ್ನು ಬಿಡಿಸಿ ಬಿಡಿಸಿ ನಮಗೆ ಅವರ ಸವಿ ಉಣಬಡಿಸಿದವರೇ ನೀವು.
    "ನಗುತ ಒಲಿವೆವು ನಾವು, ನಗುತ ಒಲಿಸುವೆವು." ಬೆಂದ ಬೇಂದ್ರೆ ಅಜ್ಜನ ಮಾತುಗಳು ಸೀಧಾ ಮನದಾಳಕ್ಕೆ
    ಇಳಿಯುತ್ತವೆ .
    ಬದರಿ ಸರ್, ನಿಮ್ಮಂತ ಕವಿಯಿಂದ ಬರುವ ಎರಡು ಪ್ರೋತ್ಸಾಹದ ಮಾತುಗಳೂ ಹಿತ. ಬಾಲಮುರಳಿಯವರ ಗಾನವೇ ಅಂಥದ್ದು ಲೋಕ ಮರೆಸುವಂಥದ್ದು ಅಲ್ಲವೇ ? ಇನ್ನು ಕಾಕಾ, ದೀಕ್ಷಿತರು , ಯೇಟ್ಸ್ ಬಗ್ಗೆ ಏನು ಹೇಳಲಿ ? ನಿಮ್ಮಗಳಿಂದಲೇ ತಿಳಿಯಬೇಕಿದೆ ನಾ.
    ಚಿನ್ಮಯ್ , ನಿಮ್ಮ ಮೆಚ್ಚುಗೆಗೆ ವಂದನೆಗಳು.

    ReplyDelete
  5. ರೆಪ್ಪೆ ಮುಚ್ಚದ ಮಾತ್ರಕ್ಕೆ ಎಚ್ಚರವೇ ?

    ಇದು ಕಣ್ಣು ಬಿಟ್ಟೆ ನಿದ್ರಿಸುವರಿಗೆ ಕೇಳುವಂತಿದೆ. ವಿಡಂಬನಾತ್ಮಕ ಕವಿತೆ.

    For nothing can be sole or whole

    ಎಂತಹ ಸುಂದರ ಸಾಲು. ಇಂತಹ ಸಾಲನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದ.

    ಚೆನ್ನಾಗಿದೆ.ಯಾವುದೇ ಇನ್ನಷ್ಟು ಕಾಮೆಂಟ್ಗಳು ಇಲ್ಲ.

    ReplyDelete
  6. ನೀವು ಯೇಟ್ಸ್ ಕವಿಯಿಂದ ಪ್ರಭಾವಿತರಾಗಿ ಒಂದು ಕವನವನ್ನೇ ಬರೆದಿದ್ದೀರೆಂದರೆ ಅವರ ಬಗ್ಗೆ ನನಗೂ ತಿಳಿಯಬೇಕು.
    ನಿಮ್ಮ ಕವನದಲ್ಲಿ "ರೆಪ್ಪೆಗಳನ್ನು ಜೋಡಿಸುವುದು' ಮತ್ತು 'ರೆಪ್ಪೆಮುಚ್ಚಿದಳು' ಎಂಬ ಅಲಂಕಾರವನ್ನು ಉಪಯೋಗಿಸಿ ಅಲ್ಲಿರುವ ಪಾತ್ರವು ನಿದ್ದೆ ಮಾಡದ ರಾತ್ರಿಗಳ ಬಗ್ಗೆ ಮತ್ತು ಮತ್ತೆ ಬಾರದ ಲೋಕಕ್ಕೆ ಹೋದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಕವನ ತುಂಬಾ ಇಷ್ಟವಾಯಿತು.

    ReplyDelete
  7. ಧನ್ಯವಾದಗಳು ವಿನಾಯಕ್ ಮತ್ತು ನಾಯಕರಿಗೆ.
    ಖಂಡಿತಾ ಓದಿ. ನಿಮಗಿನ್ನಷ್ಟು ದಕ್ಕಬಹುದು.

    ReplyDelete
  8. ಒಂದೊಳ್ಳೆ ಕವನ ಸ್ವರ್ಣಕ್ಕ.

    ReplyDelete
  9. ಅದ್ಭುತವಾಗಿದೆ... ಅಸಲಿಗೆ ಎಚ್ಚರಗೊಂಡವರಿಗೆ ಲೋಕದ ಹಂಗೇಕೆ...? ವಾವ್.. ಬಹಳ ಇಷ್ಟವಾಯ್ತು..

    ReplyDelete
  10. ಮಲಗೆದ್ದವಳು -- ಮಲಗಿ ಗೆದ್ದವಳು,ಮಲ ಗೆದ್ದವಳು,ಮಲಗೆ ಮಲಗೆ ಕೊನೆಗೂ ಗೆದ್ದವಳು - ಎಂಥಹ ಅರ್ಥಪೂರ್ಣವಾದ ಶಿರ್ಷಿಕೆ.
    -Anil Talikoti

    ReplyDelete