Thursday, October 17, 2013

ಸೋಹಂಸೋ

 

ಚಿತ್ರಕೃಪೆ :ಅಂತರ್ಜಾಲ
ಕನಕದಾಸರು ಪ್ರಾಸಗಳನ್ನು ಬಳಸುವ ರೀತಿ ನನಗೆ ಬಹು ಇಷ್ಟ. ಈಶ ನಿನ್ನ ಚರಣ ಭಜನೆ..ಬರೆದ ಅವರ ಕೈ ಹಿಡಿದು ಎನಜ್ಜಾ ಎಲ್ಲಿಂದ ಕಲಿತಿ ಈ ಜಾದೂ ಎಂದು ಕೇಳಬೇಕೆನ್ನುವ  ಹುಚ್ಚು ಐಡಿಯಾ ನನಗೆ ಆಗೀಗ ಬರುವುದಿದೆ.   ಕೆಲ ದಿನಗಳಿಂದ ಅವರ
 “ಇಷ್ಟುದಿನ ಈ ವೈಕುಂಠ
ಎಷ್ಟು ದೂರವೋ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೆ ಶ್ರೀ ರಂಗ ಶಾಯಿ
ಅನ್ನೋ ಪದ ತುಂಬಾ ಕಾಡುತಿತ್ತು.

ವಿದ್ಯಾ ಭೂಷರ ಧ್ವನಿಯಲ್ಲಿ ಹಾಡನ್ನು ಇಲ್ಲಿ ಕೇಳಬಹುದು  http://www.youtube.com/watch?v=To9TfXApjn8
ಕನಕರ ಪದದೊಡನೆ ನೆನಪಾಗುತ್ತಿದ್ದ  ತೆಲುಗಿನ ಸಾಲು 'ಅನ್ನಿ  ನೀವನಚು ಅಂತರಂಗಮುನ ತಿನ್ನಗಾ ವೆದಕಿ ತೆಲಿಸಿಕೊಂಟಿನಯ್ಯ... ತ್ಯಾಗರಾಜರ ಸುಪ್ರಸಿಧ್ಧ ಕೃತಿ ಮರುಗೇಲರ ಓ ರಾಘವ ದಲ್ಲಿನ ಸಾಲು. ಭಾಷೆ ಬೇರೆ ಭಾವ ಒಂದೇ. 
 ಸಪ್ತಪದಿ ಚಿತ್ರದಲ್ಲಿ ಬಳಕೆಯಾದ ಹಾಡನ್ನು ಇಲ್ಲಿ ಕೇಳುತ್ತಾ ನೋಡಬಹುದು  http://www.youtube.com/watch?v=CX4kT967Fbo
ಹೌದಲ್ಲವೇ ? ನಿಜವಾದ ಹುಡುಕಾಟ ನಡೆಯಬೇಕಾದ್ದು  ಅಂತರಂಗದಲ್ಲಿ .
ಫೇಸ್ ಬುಕ್ಕಿನಲ್ಲಿ,  ಮೇಲ್ ಅಕೌಂಟು , ಫೇಸ್ ಬುಕ್ ಅಕೌಂಟು  ಇಲ್ಲದ ಗೃಹಿಣಿಯೊಬ್ಬಳು ಹಾಡುಗಾರ್ತಿಯಾಗಿ ಪ್ರಸಿಧ್ಧಳಾಗುತ್ತಿರುವ ವಿಚಾರ ಬಂದಿತ್ತು . ಆ ಹಾಡು ಚಮಯಂ  ಚಿತ್ರದ  ರಾಜಹಂಸಮೆ..
ಹಾಡು  ಕೇಳಿ  ಮಲೆಯಾಳದ ಒಂದು ಪದವೂ ಅರ್ಥವಾಗದಿದ್ದರೂ  ಕೆಳಗಿನ ಸಾಲುಗಳು ಮೂಡಿದವು .
ಹಾಡನ್ನು ಇಲ್ಲಿ http://www.youtube.com/watch?v=tlDBc9DaYxE ಕೇಳುತ್ತಾ ನೋಡಬಹುದು.

ಹಾರಲಾಗದ ರಾಜಹಂಸವೇ
ಒಂದು ಮನವಿ  ಕೇಳು ,
ನನ್ನ ಹಾಡಿನ  ದನಿ,
ಅಂಗೈಯ ಹೃದಯ ರೇಖೆ ,
ಆತ್ಮರಾಗದ ಕೇಳುಗ
ಅವನೆಲ್ಲಿ ಹೇಳು !
ಆಲಿಸುವುದ ಮರೆತು ಬರೀ ಮೊರೆವ
ಕಡಲೇ ಕೊಂಚ ಕೇಳು
ಕ್ಷಣಕ್ಕೊಂದು ಸುತ್ತು ತೇಯುತ್ತಾ  ಗಂಧವಾಗುತ್ತಿದ್ದೇನೆ
ಹಾದಿ ಅವನದೇ ಆಗಿರಲಿ
ಉರಿದುರಿದು  ಕಪ್ಪುರವಾಗಿ ಕರಗುತ್ತಿದ್ದೇನೆ
ಗುಡಿಯ ದೈವ ಅವನೇ ಆಗಿರಲಿ 
ಬಾಗಲಾರದ ಮುಗಿಲೇ
ತುಸು ಕೇಳು
ತಾರೆಗಳೆಲ್ಲಾ ಅವನ ನಗೆಯಾಗಿ
ಮೋಡಗಳೆಲ್ಲಾ ಅವನ ಹೆಜ್ಜೆಗಳಾಗಿ
ತೋರುತ್ತಿವೆ ಎನಗೆ
ರಾತ್ರಿ ಮುಗಿಯದಿರಲಿ 
ಕಾಣದೂರಿನ ಕಿವುಡು ದೈವವೇ
ಪ್ರಾರ್ಥನೆಯಲ್ಲವಿದು
ಆದರೂ ಕೇಳು
ಗಾಳಿ ಅವನುಸಿರು
ಮಳೆಯವನ ದನಿ
ಚಿಟ್ಟೆಯವನ ಚಿತ್ರ
ಹಸಿರವನ ತೋಳು
ಹೊಳೆಯವನ ಬೊಗಸೆ
ಸಾಕಿಷ್ಟು ನನಗೆ
ಉಳಿದದ್ದೆಲ್ಲಾ ನಿನಗೇ !

ಈ ಪೋಸ್ಟಿನ ಶೀರ್ಷಿಕೆ  ಮೂಗಿಗಿಂತ ಮೂಗೂತಿ ಭಾರ ಎನ್ನುವಂತಿದೆ ಆದರೂ ಬೇರಾವ  ಶೀರ್ಷಿಕೆಯೂ ಹೊಳೆಯದ ಕಾರಣ ಭಾರದ ಮೂಗುತಿಯನ್ನೆ ಇಟ್ಟಿದ್ದೇನೆ!

10 comments:

  1. ಮಳಿಯಾಳದ ಹಾಡಿನಿಂದ ಸ್ಪೂರ್ತಿಗೊಂಡು ನೀವು ಬರೆದ ಕವನದ ಸಾಲುಗಳು ಬಹಳ ಚೆನ್ನಾಗಿವೆ.ಕೊನೆಯ ಸಾಲುಗಳು ತುಂಬಾ ಇಷ್ಟವಾದವು.

    ReplyDelete
  2. ತಮ್ಮ ಪಾದ ತೋರಿ ಸ್ವರ್ಣ. ಎಲ್ಲ ನನ್ನ ನೆಚ್ಚಿನ ಕೃತಿಗಳೇ.

    ತೆಲುಗಿನ ಕೆ. ವಿಶ್ವನಾಥ್ ಮತ್ತು ಕನ್ನಡದ ಪುಟ್ಟಣ್ಣ ಕೃತಿ ಅನಾವರಣಗೊಳಿಸುವುದರಲ್ಲಿ ಎತ್ತಿದ ಕೈ.

    ನನಗೆ ತುಂಬ ಇಷ್ಟವಾದ ಪೋಸ್ಟ್ ಇದು.

    ReplyDelete
  3. ಸ್ವರ್ಣಾ,
    ತುಂಬ ಸುಂದರವಾಗಿ ಕವನವನ್ನು ಬರೆದಿದ್ದೀರಿ. ಮನದ ವೀಣೆಯನ್ನು ಮಿಡಿಯುವಂತಹ ಕವನವಿದು.

    ReplyDelete
  4. రచన: త్యాగరాజ

    మరుగేలరా ఓ రాఘవా!

    మరుగేల – చరా చర రూప
    పరాత్పర సూర్య సుధాకర లోచన

    అన్ని నీ వనుచు అంతరంగమున
    తిన్నగా వెదకి తెలుసుకొంటి నయ్య
    నెన్నె గాని మదిని ఎన్నజాల నొరుల
    నన్ను బ్రోవవయ్య త్యాగ రాజనుత

    ReplyDelete
  5. ಓದುವುದರಿಂದ ಪ್ರೇರಣೆ ಪಡೆದು ಹೊಸ ಹೊಸ ಪದಗಳ ಜೋಡಿಸುವುದರಿಂದ ಭವಗಳ ಹೊರಹಾಕುವ ಪರಿ ಚೆನ್ನಾಗಿದೆ. ಸುಂದರ ಸಾಲುಗಲು. ಮುಂದುವರೆಸಿರಿ. ಶುಭವಾಗಲಿ.

    ವಿನಾಯಕ ಭಾಗ್ವತ
    http://vinayakgbhagwat.blogspot.in/

    ReplyDelete
  6. ಕಾಕಾ , ಬದರಿ ಸರ್ ಮತ್ತು ನಾಯಕರಿಗೆ ಧನ್ಯವಾದಗಳು
    @ಬದರಿ ಸರ್, ದೊಡ್ಡ ಮಾತು. ಈ ಹಾಡುಗಳು ನಿಮಗೇ ಚೆನ್ನಾಗಿ ಗೊತ್ತು .
    ಹಾಡಿನ ಪೂರ್ತಿ ಪಾಠವನ್ನು ತೆಲುಗಿನಲ್ಲೇ ಕೊಟ್ಟಿದ್ದಕ್ಕಾಗಿ ಥ್ಯಾಂಕ್ಸ್

    ReplyDelete
  7. ನನಗೆ ನೀವು ಬರೆದ ಯಾವ ಹಾಡುಗಳೂ ಗೊತ್ತಿಲ್ಲ ಮೇಡಮ್..ನೀವು ಕೊಟ್ಟ ಲಿಂಕಿನಲ್ಲಿ ಕ್ಲಿಕ್ಕಿಸಿ ಕೇಳಿದೆ ಚೆನಾಗಿದೆ :)..
    ಇನ್ನು ನೀವು ಬರೆದ ಆ ಸಾಲುಗಳ ಬಗ್ಗೆ ನಾ ಹೇಳಲು ಇನ್ನೂ ತೀರಾ ಚಿಕ್ಕವನು...ಹಾಂ ಒಂದಂತೂ ಸತ್ಯ, ಭಾಷೆ ಸರಿಯಾಗಿ ಬರದಿದ್ದರೂ ಕೆಲವೊಂದು ಗೀತೆಗಳು ನಮ್ಮೊಳಗೇ ಒಂದಿಷ್ಟು ಸಾಲುಗಳನ್ನು ಹುಟ್ಟು ಹಾಕುತ್ತವೆ...ನನಗೂ ಒಂದೆರಡು ಬಾರಿ ಎಲ್ಲೋ ಒಂದೆರಡು ವಾಕ್ಯ ಹೊಳೆದದ್ದುಂಟು ಇಷ್ಟು ಮಾತ್ರ ಹೇಳಬಲ್ಲೆ ಆಷ್ಟೆ...
    ಬರೀತಾ ಇರಿ..
    ನಮಸ್ತೆ :)

    ReplyDelete
    Replies
    1. ಹೌದು ಚಿನ್ಮಯ್,that's the beauty of communication. Thanks.

      Delete
  8. ಯಾರ ಪ್ರಭಾವಕ್ಕೂ ಒಳಗಾಗದೆ ನನ್ನದೇ ಬರವಣಿಗೆಯ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂಬ ಅನಿವಾರ್ಯತೆ ಮತ್ತು ಹಟಕ್ಕೆ ಬಿದ್ದು, ಓದುವುದನ್ನೇ ಬಿಟ್ಟಿದ್ದೆ. ಪ್ರತಿಭೆ ಮತ್ತು ಭಾವತೀವ್ರತೆ ಎರಡೂ ಉತ್ತುಂಗ ಸ್ಥಿತಿಯಲ್ಲಿರುವ ಕವಿಯಿಂದ ಮಾತ್ರ ಇಂತಹದ್ದೊಂದು ಕವಿತೆಯ ಸೃಷ್ಠಿ ಸಾಧ್ಯ! ನಿಮ್ಮನ್ನು ಓದದೆ ಆದ ನಷ್ಟವನ್ನು ಇವತ್ತೇ ನಿಮ್ಮ ಎಲ್ಲಾ ಬರಹಗಳನ್ನು ಓದಿ ತುಂಬಿಕೊಳ್ಳುತ್ತೇನೆ. ಇಂತಹದ್ದೊಂದು ಕವಿತೆ ನಮ್ಮ ಹತ್ತು ಸಂಜೆಗಳಿಗೆ ಸಂಭ್ರಮ ತುಂಬಬಲ್ಲುದು! ಯಾರನ್ನೂ ಓದಬಾರದೆಂಬ ನನ್ನ ಶಪಥವನ್ನು ಮುರಿದು ನಿಮ್ಮ ಅಭಿಮಾನಿಯಾಗಿದ್ದೇನೆ. ಕವಿ ಎಷ್ಟೇ ದೊಡ್ಡವನಾದರೂ ಆತ ಉಳಿದ ಮನುಷ್ಯರಂತೆಯೇ ಮೃಣ್ಮಯ, ಇಂತಹ ಕವಿತೆಗಳು ಮಾತ್ರ ದೇವರಂತೆ ಚಿನ್ಮಯ!

    ReplyDelete
    Replies

    1. ದೊಡ್ಡ ಮಾತು . ಯಾರ ಪ್ರಭಾವವೂ ನಿಮ್ಮ ಬರಹಗಳಲ್ಲಿ ನನಗಂತೂ ಕಾಣಲಿಲ್ಲ.
      ಹಿರಿಯರಾದ ಸುನಾಥ್ ಕಾಕಾ ಕೂಡ ನಿಮ್ಮ ಬ್ಲಾಗನ್ನ ಬಹುವಾಗಿ ಮೆಚ್ಚಿಕೊಂಡರು.
      ನೀವು ಬರೆದ ಕಥೆಗಳು , ಬರಹಗಳು ಮತ್ತು ಕವಿತೆಗಳು ನೆನಪಿನಲ್ಲುಳಿಯುತ್ತವೆ.
      ಬರೆಯುತ್ತಿರಿ . ಬ್ಲಾಗ್ ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು

      Delete