Thursday, April 05, 2012

ಎಷ್ಟು ತಪವನು ಮಾಡಿ ಪಡೆದೆನೋ ನಾ ನಿನ್ನ.....

ಅದೇನೋ ಅನ್ನಿಸಿ ಊರ್ಮಿಳೆಯ ಬಗ್ಗೆ ಬರೆದೆ. ಆಮೇಲೆ ದ್ರೌಪದಿ  ಕಾಡಿದಳು.
ಮತ್ತೆ ಬಂದದ್ದು  ಕುಂತಿ.  ನಾನು ಓದಿರುವ ಅಥವಾ ಕೇಳಿರುವ ಸ್ಥೀಮಿತವಾದ ಚೌಕಟ್ಟಿನಲ್ಲಿ
ಪಾತ್ರಗಳನ್ನಿಡುವ ಪ್ರಯತ್ನ ಇದು. ಹಲವಾರು ತಪ್ಪುಗಳಿರಬಹುದು, ನನಗೆ ಆ ಪಾತ್ರಗಳು ಹೆಚ್ಚು
ಅರ್ಥವಾದಾಗ ಈ ಸಾಲುಗಳೇ ಗೌಣ ಅನ್ನಿಸಬಹುದು.

ಯಶೋಧೆಯ ತಾಯ್ತನದ ಬಗ್ಗೆ ಮನದಣಿಯುವಂತೆ  ದಾಸರು ಹಾಡಿದ್ದಾರೆ. ನನ್ನಲ್ಲಿ  ಹೊಸದೇನೂ ಹೇಳಲು ಇಲ್ಲ.
ಆದರೂ ಯಶೋಧೆ ಕಾಡಿದ್ದರಿಂದ ಈ ಪ್ರಯತ್ನ . ಕೃಷ್ಣ ಗೋಕುಲ ಬಿಟ್ಟ ಮೇಲೆ ಯಶೋದೆ (ಯಶೋಧೆ?)  ಏನಾದಳು ಎಂದು
ನನಗೆ ಗೊತ್ತಿಲ್ಲ. ಯಾವುದಾದರೂ ಪುರಾಣ  ಅದ ಹೇಳಿದ್ದರೆ ತಿಳಿಸಿ.

"ಎಷ್ಟು ತಪವನು ಮಾಡಿ ಪಡೆದೆನು ನಾನಿನ್ನ"  ಎಂಬುದು ದಾಸರ ಕೃತಿಯ ಒಂದು ಸಾಲು.
"ಎಷ್ಟು ತಪವನು ಮಾಡಿ ಪಡೆದೆನು ನಾನಿನ್ನ,
 ಕಷ್ಟ ವಾಗಿದೆ ನಿಂದನೆ ನುಡಿಯ ಕೇಳುವುದು
ಚೇಷ್ಟೆ ಯನು ಮಾಡದಿರೋ ಕೃಷ್ಣ , ಈ ಪರಿ  ಬಹಳ
ನಿಷ್ಠೂರ ವಚನವನ್ನು ಆಡುವರು ಜನರು  "
ಹೀಗೆ ಸಾಗುತ್ತದೆ ಈ ಪದ. ಎಂದಿನಂತೆ ದಾಸರಿಗೆ   ಆದಿಪ್ರಾಸ ಸುಲಲಿತ.
ಇದರ ರಚನೆ ಯಾರದ್ದು ಅಂತಾನೂ ಮರೆತು ಹೋಗಿದೆ. ಮರೆತು ಹೋದ ಹಾಡನ್ನು ಮತ್ತೆ ಹೆಕ್ಕಿ ಕೊಟ್ಟದ್ದು ಬಾಲ್ಯದ ಗೆಳತಿಯ ಅಣ್ಣ. ಅವನಿಗೆ ಧನ್ಯವಾದಗಳು.
ಪೂರ್ಣ ಪಾಠಕ್ಕಾಗಿ  ಇಲ್ಲಿ ಚಿಟುಕಿಸಿ 


ನನ್ನ ಭಾಗ್ಯವ ನೋಡಿ ಕರುಬಿದವರೇ ಎಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಹುಟ್ಟಿದ ಮಗು ಹೆಣ್ಣೆಂದರು
ಹೆಣ್ಣು  ಮಾಯೆ ಎಂದರು
ಅದಾವುದೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಕಣ್ಣು ಬಿಟ್ಟಾಗ ಪಕ್ಕ ಇದ್ದದ್ದು ಮುದ್ದಾದ ಗಂಡು ಮಗು
ಲೋಕಕ್ಕೆ ಮತ್ತೆ ನನ್ನ  ತಂದಿತ್ತು, ಅದರ ಕೂಗು
ನನಗಿನ್ನೇನೂ ಕೇಳಲು ಹೊಳಿಯಲೇ ಇಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಕೂಸನ್ನ ವರ್ಣಿಸಲು ಸೋತರಂತೆ ದೇವಾನು ದೇವತೆಗಳು
ಇನ್ನು ನಾನೆಷ್ಟರವಳು ?
ಆ ಹೊತ್ತಿಗೆ ನನಗಿನ್ನೇನೂ ಬೇಕಿರಲಿಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಹಾಲ ನೆಪದಲ್ಲಿ ವಿಷಉಣಿಸಲು ನೋಡಿದರು
ಕಟ್ಟಿದ ಕಲ್ಲಲ್ಲೇ ಕೊಲ್ಲಲು ಹೊಂಚಿದರು
ಆಗ ನನ್ನ ಸಂಕಟ ಆ ದೇವ ಬಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಬೆಣ್ಣೆ ಕದ್ದನೆಂಬ ದೂರು ತಂದವರೆಷ್ಟೋ
ಹೆಣ್ಣಿನ ಸೀರೆ ಕದ್ದನೆಂಬ ಕೂಗೆಷ್ಟೋ ,
ಆಗ ನಿನ್ನ  ಅದೆಷ್ಟು ಬೈದೆನಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಎಲ್ಲ ಬಿಟ್ಟು ಹೊರಟೆ  ಒಮ್ಮೆ ಮಥುರೆಗೆ
ನಿನ್ನ ಹೆತ್ತ ತಾಯಿ, ತಂದೆ, ವೈರಿ ಮಾವನೆಡೆಗೆ
ನಾನಾಗ ನನ್ನಲ್ಲೇ ಇರಲಿಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಅದೆಷ್ಟು ಮನ ಮೋಹಿಸುವಂತಿದ್ದೆ ನೀನು,
ಮನದಣಿಯೆ ನೋಡಲೇ ಇಲ್ಲ ನಾನು,
ಬಾಯಲ್ಲಿ ಜಗವ ತೋರಿದಾಗ ನೀ ನನ್ನನ್ನೂ ತೋರಬಹುದಿತ್ತಲ್ಲ ?
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ತೊರೆದು ಹೋದ ಕೊಳಲಲ್ಲಿ ನಿನ್ನ ಉಸಿರ ಹುಡುಕುತ್ತೇನೆ ನಾನು
ನೀನಿರದೆ ಆ ಬಿದಿರು ಕೊಳಲೇ  ಏನು ?
ಅದ ನುಡಿಸಲಾದರೂ ನೀ ಮತ್ತೆ ಬಾರಲ್ಲ?
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಅದೆಷ್ಟು ಜನ ನಿನ್ನ ಬಾಲ್ಯ ಕಾಣ ಬಂದರಲ್ಲ
ಮುಕುಂದನ ತಾಯಾದವಳೆಂದು ಹೊಗಳುವರೆ ಎಲ್ಲ
ಬಂದು ನನ್ನಲೊಂದು ಕಿಚ್ಚ ಹೊತ್ತಿಸಿದರಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ನಾನೆಷ್ಟು ನೊಂದೆ ನೀ ಲೋಕಗುರುವೆಂದರಿತಾಗ ,
 ಯಾರಿಗೇನಾದರೇನು ನೀ ನನಗೆ ಮಗ
'ತಾಯಿ' ಜ್ಞಾನಿಯಾಗಲಾರಳಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ಇಂದು ಲೋಕ ಹೇಳುತ್ತೆ  'ಸಾಕು' ತಾಯಿ ಯಶೋದೆ
ತಾಯಿಯಲ್ಲೂ 'ಸಾಕು' ಬೇಕೆಂಬ ಬೇಧವಿಹುದೇ?
ನಿನ್ನ ಮಗನೆಂದು ಬಗೆದ ಎಲ್ಲ ಹೆಂಗಳೆಯರು ತಾಯಿಯರಲ್ಲ
ನನ್ನ ನೋವು ಯಾರಿಗೂ ತಿಳಿಯಲೇ ಇಲ್ಲ

ನಿನ್ನಾಟ ಕಂಡು ಅಪ್ಪಿ ಮುದ್ದಾಡಿದ ಭಾಗ್ಯ ನನ್ನದು
ಜಗವ ಹೊತ್ತ ಬಾಯಿಗೆ ತುತ್ತನಿತ್ತ ಪುಣ್ಯ ದೊಡ್ಡದು
ನನ್ನ ನೋವ ಯಾರೂ ಅರಿಯದಿದ್ದರೂ ಚಿಂತಿಲ್ಲ
ಚಿನ್ಮಯ, ನಿನ್ನ ಮುಂದೆ ಇದೊಂದು ನೋವೇ ಅಲ್ಲ

ತಪ್ ಹೆಜ್ಜೆಯನ್ನಿಟ್ಟು ಬಿದ್ದಾಗ ಎತ್ತಿಕೊಂಡತ್ತ ಕಂಬನಿ ಹಿರಿದು
ಬೆಣ್ಣೆ ಕಡಿದು ನಿನ್ನ ಜರಿದು ಮತ್ತೆ ನಿನಗೇ ಅದ ಉಣಿಸಿದ ಕ್ಷಣ ಸತ್ಯವದು
ನನ್ನ ನೋವ ಯಾರೂ ಅರಿಯದಿದ್ದರೂ ಚಿಂತಿಲ್ಲ
ಚಿನ್ಮಯ, ನಿನ್ನ ಮುಂದೆ ಇದೊಂದು ನೋವೇ ಅಲ್ಲ

ಮತ್ತೆ ನಿನ್ನ ನೆನೆದು ಕೊರಗೆ ನಾನು
ನಾನಿಲ್ಲಿ ಅತ್ತರೆ, ಹೇಗೆ ನಗುತ್ತಿ ಅಲ್ಲಿ ನೀನು?
ಇನ್ನಳಲಾರೆ ನಾನು.
 

4 comments:

  1. ಯಶೋದೆಯ ತಾಯಿಹೃದಯದ ಸಂಕಟವನ್ನು ಅನುಭವಕ್ಕೆ ಬರುವಂತೆ ಬರೆದಿದ್ದೀರಿ.
    ‘ಯಶ+ದಾ’ ಅಂದರೆ ಯಶವನ್ನು ಕೊಡುವವಳು: ಯಶೋದಾ.
    ಕಂದನ ಅಗಲಿಕೆಯನ್ನು ದೇವಕಿಯು ಮೊದಲಿಗೆ ಅನುಭವಿಸಿದರೆ, ಯಶೋದೆ ಕೊನೆಗೆ ಅನುಭವಿಸಿದಳು!

    ReplyDelete
  2. ಮಾಹಿತಿಗಾಗಿ ಧನ್ಯವಾದಗಳು ಸರ್.

    ReplyDelete
  3. ಚೆನ್ನಾಗಿದೆ ಸ್ವರ್ಣಕ್ಕಾ.. ಪ್ರಾಸದಲ್ಲಿದ್ದರೆ ಇನ್ನೂ ಖುಷಿಯಾಗುತ್ತಿತ್ತು :)

    ReplyDelete
  4. ನಂಗೆ ಅಷ್ಟು ಚೆನ್ನಾಗಿ ಪ್ರಾಸದಲ್ಲಿ ಬರಿಯಕ್ಕೆ ಬರಲ್ಲ :-(
    ಪ್ರತಿಕ್ರಿಯೆಗಾಗಿ ಧನ್ಯವಾದಗಳು
    ನಿಮ್ಮದೇ ವಯಸ್ಸಿನ ತಮ್ಮ ಇದ್ದಾನೆ ನಂಗೆ, ಈಗ ಇನ್ನೊಬ್ರು :)
    ಸ್ವರ್ಣಾ

    ReplyDelete