Thursday, August 09, 2012

ಹಳ್ಳ ಸೇರದ ಹನಿಗಳು....ಭಾವಬನಿಗಳು - ೩

 






ಚಿತ್ರ ಕೃಪೆ : ಅಂತರ್ಜಾಲ

೧.ರಂಗಾ ನಿನ್ನ
  ಸಂಗದಲ್ಲಿರಿಸಿ ಭವದ
  ಭಂಗ ಬಿಡಿಸಿ, ಕಾಯೋ
  ಅನಂಗ ಜನಕ  ಶ್ರೀಹರಿಯೇ

 
೨. ಗಂಧ ತೆಯ್ದಿತ್ತ ಕುಬ್ಜೆಯನುಧ್ಧರಿಸಿದ
    ಮಂದರ ಗಿರಿಧಾರಿ,
    ಬಂದ ವಿಪತ್ತುಗಳ ಪರಿಹರಿಸಯ್ಯ
   ಕಂದರ್ಪ ಜನಕ ಶ್ರೀ ಹರಿ
                                            
                                                       
೩. ತಿರಿದು ತಿನ್ನುವಗೆ ಅರಿಗಳೈವರು,
    ಬರಿದೆ ಬಿರುದು ಪೊತ್ತರೆ ಸಾಲದೊ
    ಮುರಾರಿ ನೀ ಬಂದು 
   ಅರಿವರ್ಗಗಳ ಬಿಡಿಸಬೇಕೋ ಶ್ರೀಹರಿಯೇ


೪ . ಪ್ರಾಸ ಪದಗಳ ಜೋಡಿಸೆ
   ಗ್ರಾಸವಾಗದೋ ಭಕ್ತಿಗೆ,
   ಈಸಿ ದಡ ಸೇರುವಂತೆ ಪೊರೆಯೋ
   ಸಾಸಿರ ನಾಮದ ಶ್ರೀಹರಿಯೇ

೫. ಬಿಂಕ ತೋರಬೇಡವೋ,
ಪಂಕಜಾಕ್ಷ,
ಅಂಕೆ ಇರದ ಮನಕೆ,
ಅಂಕುಶವನಿತ್ತು ಕಾಯೋ ಶ್ರೀಹರಿಯೇ. 

೬. ಸೂರ ದಾಸರಿಗೊಲಿದ
   ಮಾರ ಪಿತ
  ಕರುಣಾವಾರಿಧಿ,
  ದಾರಿ ತೋರೋ ಶ್ರೀಹರಿಯೇ

೭. ಗತಿ ನೀನೆ         
ಮತಿ ನೀನೆ
ಸದ್ಗತಿ ನೀನೆ
ಶ್ರೀಪತಿ ಬಂದೆಮ್ಮ  ಕಾಯೋ ಶ್ರೀಹರಿಯೇ

೮. ನಿನ್ನ ವಿರಹದಲ್ಲಿ ಬೆಂದವಳು ಮೀರಾ
   ನಿನ್ನ ನೆನಹಲ್ಲಿ ಬಾಳಿದವಳು ರಾಧೆ
  ನನಗೆ ನೆನಹೂ ಇಲ್ಲ
  ವಿರಹವೂ ಇಲ್ಲ
  ಆದರೂ ನೀ ಬಂದು ಕಾಯಬೇಕಲ್ಲ!

೯. ವಿರಹವೇ ಏಕೆ ಗೀತೆ ಯಾಗಬೇಕು?
ಹಾಡಿಗೆ ರುಕ್ಮಿಣಿಗಿಂತ, ಮೀರಾ ರಾಧೆಯರೇ ಬೇಕು !

 ೧೦. ನೀನೋಲ್ಲೆಯಂತೆ ವೃಂದೆ ಇಲ್ಲದ ಪೂಜೆಯನ್ನ,
ಹೌದು ಬಿಡು, ಅವಳಂತೆ ಯಾರು ಕೊಡಲಿಲ್ಲ ನಿನಗೆ ತನ್ನೆಲ್ಲ ಕನಸ ಚಿಗುರನ್ನ

" मारा री गिरिधर गोपाल ......"
"सावरा रे मारी प्रीत निबाजो जी ....."   ಇಂತಹ    ಸುಂದರ ಮೀರಾ ಭಜನೆಗಳನ್ನ್ನು  ಕೇಳಲು ಇಲ್ಲಿ ಕ್ಲಿಕ್ ಮಾಡಿ 


"' ಗೋವು'ಗಳ ರಕ್ಷಿಸಲು ಗೋಪಾಲ ಬೇಗ ಅವತರಿಸಲಿ . ರಂಗಾ ನಿನ್ನ ಸಂಗದಲ್ಲಿರಿಸೊ  "


4 comments:

  1. ಗೋಕುಲಾಷ್ಟಮಿ ದಿವಸ ಸ್ವರ್ಣ ಅವರ ಈ ಪ್ರಕಟಣೆ ವಿಶಿಷ್ಟವಾಗಿದೆ.

    ಮೊದಲಿಗೆ ವಿಭಿನ್ನ ಶೀರ್ಷಿಕೆ.

    ಎರಡನೇ ಚರಣದಲ್ಲಿ ಬರುವ ಗಂಧ ತೇಯ್ದ ಕುಬ್ಜೆಯಾರು?

    ನಾಲ್ಕನೇ ಚರಣದಲ್ಲಿ ಪೊಳ್ಳು ಕವಿಗಳಿಗೆ ಛಡಿ ಏಟು.

    ೬ನೇ ಚರಣ ನನಗೆ ಮನ ಮುಟ್ಟಿತು. ಕುರುಡರಾದ ಸೂರ ದಾಸರು ನನಗೆ ನೆಚ್ಚಿದವರು.

    ೮ನೇ ಚರಣಕ್ಕೆ ಬಂದಾಗ ಮೀರಾ ರಾಧಾ ತೂಕವಿಟ್ಟಂತಿದೆ.

    ಮೀರಾ ಭಜನೆಗಳನ್ನು ಮತ್ತೊಮ್ಮೆ ಕೇಳಿಕೊಂಡೆ.

    ಗೋವುಗಳ ಅಂತ ನೀವು ವಿಶೇಷವಾಗಿ ಹೇಳಿರುವುದರಿಂದ ಅದು ನಾನೇ ಎಂದು ಅರ್ಥ ಮಾಡಿಕೊಳ್ಳ ಬಲ್ಲೆ.

    ಒಟ್ಟಾರೆ ನೀವು ಇಂತಹ ಪ್ರಕಟಣೆಗಳಿಂದ ನಮಗೆ ಮಾದರಿಯಾಗುತ್ತೀರಿ.

    ReplyDelete
  2. ಧನ್ಯವಾದಗಳು ಬದರಿ ಸರ್.
    ಎಲ್ಲರಲ್ಲೂ ಮಾದರಿಯನ್ನ ಕಾಣುವುದು ಮಾದರಿ ವ್ಯಕ್ತಿಗಳ ಲಕ್ಷಣ :).
    ಕುಬ್ಜೆ ಯ ಕಥೆ ಭಾಗವತದಲ್ಲಿ ಬರತ್ತೆ.
    ಗೋವುಗಳು ಎಂಬ ಪದಕ್ಕೆ ಬಹಳ ಅರ್ಥಗಳಿವೆ,
    ಆಡು ಭಾಷೆಯಲ್ಲಿ ಹಸುವಾದರೆ, ಇನ್ನು ಕೆಲವು ಅರ್ಥಗಳು ವೇದ
    ಜ್ಞಾನ ಅಂತ ಕೇಳಿದ್ದೇನೆ.

    ReplyDelete
  3. ಸ್ವರ್ಣಾ,
    ಮಧುರವಾದ,ಅರ್ಥಪೂರ್ಣವಾದ ಹನಿಗಳು.
    ರುಕ್ಮಿಣಿ ಕೃಷ್ಣನಲ್ಲಿ ಐಕ್ಯಳಾಗಿಯೇ ಇರುವುದರಿಂದ, ಅವಳು ಹಾಡುವುದಾದರೂ ಎಂತು, ಏಕೆ?
    ಅವನಿಂದ ದೂರವಾಗಿರುವ ರಾಧಾ ಹಾಗು ಮೀರೆಯರೇ ಸಂಗಕ್ಕಾಗಿ ಹಾಡಬೇಕಲ್ಲವೆ?
    ನೀವು ಕೊಟ್ಟ linkಅನ್ನು ಇನ್ನೂ ನೋಡಿಲ್ಲ, ನೋಡುತ್ತೇನೆ. Thanks.

    ReplyDelete
  4. ರುಕ್ಮಿಣಿಯ ಬಗ್ಗೆ ನಾನು ಈ ರೀತಿ ಭಾವಿಸಿರಲಿಲ್ಲ ಕಾಕಾ.
    ಹೆಚ್ಚು ತಿಳಿದ ಹಾಗೆ ವಿಚಾರಗಳು ಸ್ಪಷ್ಟ :)
    ಧನ್ಯವಾದಗಳು.

    ReplyDelete