Thursday, October 11, 2012

ದಕ್ಕಿತೊಂದು ಮೌನ

 ನಮ್ಮದು ಸಣ್ಣ ಊರು. ಎಲ್ಲೆಡೆಗೂ ನಡೆದೇ ಹೋಗ ಬಹುದಾದಷ್ಟು ದೂರ. ಹಾಗೆ ನಡೆವಾಗ ಅವ ಭೇಟಿಯಾದ ಸ್ಥಳ ಕಂಡರೆ ಮನಸು ಮತ್ತೆ ಭೇಟಿಯ ಕಡೆ ವಾಲಿ , ಅಂದಿನ ಮಾತಿನ ಕಡೆಗೆ ಓಡಿ ಕಟ್ಟ ಕಡೆಯಲ್ಲಿ ಅವನ ನಗೆಯಲ್ಲಿ ಲೀನವಾಗಿ ಹೋಗುತ್ತಿತ್ತು. ಮತ್ತೆ ಹೊರಬರಲು ಹಲ ಬಾರಿ ಕೆಲ ದಿನ ಹಿಡಿದದ್ದು ಇದೆ. ಎರಡು ಮನಸು ಸೇರಿ ಆಡಿದ ಮಾತನ್ನ ಮರೆವುದು ಸ್ವಲ್ಪ ಸುಲಭ  ಏಕೆಂದರೆ ಅಲ್ಲಿ ಇನ್ನೊಂದು ಮನಸಲ್ಲೆನಿದೆ ಅಂಥ ಪೂರ್ತಿಯಲ್ಲದಿದ್ದರೂ ಸ್ವಲ್ಪವಾದರೂ ಗೊತ್ತಿರುತ್ತದೆ ಆದರೆ ಒಮ್ಮುಖವಾಗಿ ಹರಿದ ಭಾವ ಲಹರಿಯನ್ನ ತಡೆ ಹಿಡಿವುದು ?.  ಏನೆಲ್ಲಾ ಪ್ರಯತ್ನ ಪಟ್ಟು ಇದು ನಡೆಯಲ್ಲ ಅಂತ ನಾನೆಂದರೆ ಇನ್ನೊಂದು ಮನ ಅದಕೆ ಮತ್ತಿನ್ನೇನೋ ವಾದ ಹಾಕಿ ನಡೆಯುತ್ತೆ ಅಂತ ಮತ್ತೆ ಆಸೆ ತೋರಿಸುತಿತ್ತು. ಕನಿಷ್ಠ ಇದೇ ಊರಿನಲ್ಲಿದ್ದುಕೊಂಡು ಹೊರ ಬರಲು  ಸಾಧ್ಯವಾಗುವ ಸಾಧ್ಯತೆಗಳು ಕಡಿಮೆ ಅನ್ನಿಸಿ   ವಿಶ್ವ ವಿದ್ಯಾಲಯವಿರುವ ಊರಿಗೆ ಹೋಗಿ ಅಲ್ಲಿನ ಖ್ಯಾತ ಪ್ರೊಫೆಸರ್  ಒಬ್ಬರನ್ನ  ಕಂಡು ಮತ್ತೊಂದು ಪ್ರಯತ್ನ ಅಂತ ಪಿ.ಎಚ್.ಡಿ ಪ್ರವೇಶ ಪರೀಕ್ಷೆ ಬರೆದೆ. ಪರೀಕ್ಷೆ ಪಾಸಾಗುತ್ತೆನೆಂಬ ಖಾತ್ರಿ ಇರಲಿಲ್ಲ ಆದರೆ ಪಾಸಾದೆ. ಮದುವೆಗೆ ಬಂದ ಹೆಣ್ಣೊಬ್ಬಳು ಇದ್ದ ಸರ್ಕಾರಿ ಕೆಲಸವನ್ನು ಬಿಟ್ಟು ಮತ್ತೆ ಓದುತ್ತೇನೆ ಎಂದಾಗ ಸಹಜವಾಗೇ ಎಲ್ಲೆಡೆ ಇಂದ ಪ್ರಶ್ನೆಗಳೆದ್ದಿದ್ದವು.  ಮಕ್ಕಳು ಮಾಡುವ ಎಲ್ಲ ತಪ್ಪುಗಳನ್ನೂ ಮನ್ನಿಸಿ ಮತ್ತೆ ಅವರನ್ನ ಬೆಂಬಲಿಸುವ ತಾಯಿ ತಂದೆಗಳ ಪ್ರಾಮುಖ್ಯತೆ ಅರ್ಥವಾಗೋದು ಬದುಕಿನ ಇಂತಹ  ಸಮಯದಲ್ಲೇ.

ನಮ್ಮೂರಿನಲ್ಲೆ ಇದ್ದು ಕೊಂಡು ಆಗಾಗ  ವಿಶ್ವವಿದ್ಯಾಲಯಕ್ಕೆ ಹೋಗಿಯೂ ಈ ಅಭ್ಯಾಸ ಮಾಡಬಹುದಿತ್ತು.  ಆದರೆ ನನಗೆ ಈ ಊರಿಂದ  ಹೊರಹೊಗಬೇಕಾದ ಅವಶ್ಯಕತೆ ಇದ್ದದ್ದರಿಂದ ನಾ ವಿಶ್ವ ವಿದ್ಯಾಲಯಕ್ಕೆ ಹೋದೆ. ಹುಟ್ಟಿ ಬೆಳೆದ ಊರನ್ನು ತೊರೆದು ಬೇರೆ ಊರಿಗೆ  ಬಂದೆ.  ವಿಶ್ವ ವಿದ್ಯಾಲಯ ಇದ್ದದ್ದು ಒಂದು ದೊಡ್ಡ ಊರಿನ ಹೊರಗೆ, ಬೃಹತ್ತಾದ ಕ್ಯಾಂಪಸ್ನಲ್ಲಿ. ಅದೆಷ್ಟೋ ವಿಷಯಗಳ ಅಧ್ಯಯನ ನಡೆಯತ್ತೆ ಅಂತ ನನಗೆ ಗೊತ್ತಾಗಿದ್ದೆ ಅಲ್ಲಿ ಹೋದ ಮೇಲೆ. ತರಗತಿಗಳು, ವಿಧ್ಯಾರ್ಥಿ ನಿಲಯ, ದೊರೆತ ಗೈಡ್ ಎಲ್ಲವೂ ಚೆನ್ನಾಗಿತ್ತು. ಕೆಲವು ಒಳ್ಳೆ ಗೆಳೆತನಗಳು ಸಿಕ್ಕವು. ಮಕ್ಕಳ ಜೊತೆ ಕೆಲಸ ಮಾಡುವುದು ಖುಷಿ ಕೊಟ್ಟಿತ್ತಾದ್ದರಿಂದ ' ಮಕ್ಕಳ  ಮನೋವಿಕಾಸದಲ್ಲಿ  ತಾಯಿಯ ಪಾತ್ರ'  ಎಂಬ ವಿಷಯವನ್ನಾರಿಸಿಕೊಂಡೆ. ಅಲ್ಲಿನ ಮನಃಶಾಸ್ತ್ರ ವಿಭಾಗದ ಕೆಲವು ಪ್ರೊಫೆಸರ್ ಗಳು  ಹಲವು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ದುಡಿಯುತ್ತಿದ್ದರು. ಅವರನ್ನ ಹಲ ವಿಧ್ಯಾರ್ಥಿಗಳು ಅನುಸರಿಸುತ್ತಿದ್ದರು. ನಾನು ಆ ಗುಂಪಿಗೆ ಸೇರಿ ಮಕ್ಕಳಿಗಾಗಿ ಕೆಲಸ ಮಾಡುವ ಒಂದು ಸಂಸ್ಥೆಗೆ ಹೋಗುತ್ತಿದ್ದೆ. ಅಲ್ಲಿನ ಸಮಸ್ಯೆಗಳನ್ನು ಕಂಡ ಮೇಲೆ ನಾ ಪರಮ ಸುಖಿ ಎಂದೆನಿಸಿತ್ತು. ವಿಶ್ವ ವಿದ್ಯಾಲಯದ ಪಕ್ಕವೇ ಮೆಡಿಕಲ್  ಕಾಲೇಜಿತ್ತು ಬಿಳಿ ಕೋಟಿನಲ್ಲಿನ  ಡಾಕ್ಟರುಗಳು ಕಂಡಾಗ ಎಷ್ಟೋ ದಿನ ಅವರಲ್ಲೆಲ್ಲಾ ಅವನೇ  ಕಂಡಿದ್ದ. ದಿನ ಸರಿದಂತೆ  ಆ ಭ್ರಮೆ ದೂರವಾಯಿತು.

ಈ ಹಿಂದಿನ ಕೆಲವರ್ಷದಲ್ಲಿ  ಆದ ಬದಲಾವಣೆ  ಎಂದರೆ ಅದೆಷ್ಟೋ ಪ್ರತಿಭಾವಂತ ವಿಧ್ಯಾರ್ಥಿಗಳು ವಿಜ್ಞಾನವನ್ನು ಬಿಟ್ಟು ಕಲಾ ವಿಭಾಗವನ್ನ ಪದವಿಗಾಗಿ ಆಯ್ಕೆ ಮಾಡಿಕೊಳ್ಳ ತೊಡಗಿದ್ದರು. ಕಲಾ ಪದವಿಗಳ  ಬೆಲೆ ಹೆಚ್ಚಿತ್ತೋ ಅಥವಾ ಯಾವಾಗಲೂ ಇದ್ದ ಬೆಲೆ ನನಗೀಗ ಅರ್ಥವಾಗಿತ್ತೋ ಗೊತ್ತಿಲ್ಲ. ನಾನಿಲ್ಲಿ ಬಂದ ಮೇಲೆ ನಾ ಮಾಡಿ ಕೊಂಡ ಇನ್ನೊಂದು ಬದಲಾವಣೆ ಎಂದರೆ  ಮೊಬೈಲ್ ಬಳಕೆಯನ್ನ ನಿಲ್ಲಿಸಿದ್ದು.  ಇದು ಅತಿಯಾಯಿತು ಎಂದು ಈಗ ಅನ್ನಿಸಿದರೂ ಆ ಕ್ಷಣಕ್ಕೆ ಸರಿ ಅನ್ನಿಸಿತ್ತು.  ಹೊರ ಜಗತ್ತಿನ ಸಂಪರ್ಕದಿಂದ ಕೆಲ ಕಾಲ ದೂರ ಉಳಿವ ಪ್ರಯತ್ನದಲ್ಲಿ ಅದೂ  ಒಂದು.

ವಿಶ್ವ ವಿದ್ಯಾಲಯದಲ್ಲಿ ನನಗೆ ದಕ್ಕಿದ್ದು ಅನಂತ ಮೌನ. ಬೃಹತ್ ಕ್ಯಾಂಪಸ್ಸಿನಲ್ಲಿ, ಲೈಬ್ರರಿಯಲ್ಲಿ, ನನ್ನದೇ ರೂಮಿನಲ್ಲಿ ಎಲ್ಲೆಡೆಯಲ್ಲೂ ಒಂದು ಘನ ಮೌನವಿತ್ತು. ಅದು ನನಗಾಗ ಬೇಕಾಗಿದ್ದ ಅತಿ ಮುಖ್ಯವಾದ ವಸ್ತು. ಕ್ಯಾಂಪಸ್ಸಿನಲ್ಲಿ ಒಂದು ಪ್ರಾರ್ಥನಾ ಮಂದಿರವಿತ್ತು. ಎಷ್ಟೋ ಜನ ಅಲ್ಲಿ ಧ್ಯಾನ ಮಾಡುತ್ತಿದ್ದರು,ಆ ಪ್ರಯತ್ನವನ್ನ ನಾ ಮಾಡದಿದ್ದರೂ ನಿಯಮಿತವಾಗಿ ಅಲ್ಲಿಗೆ ಹೋಗಿ ಮೌನದಲ್ಲಿ ಮುಳುಗುವುದು ಒಂದು ರೀತಿಯಲ್ಲಿ ಸಮಾಧಾನ ಕೊಟ್ಟಿತ್ತು. ಬಂಧ ತೀರಿದ ಬಳಿಕ ಗುರುವೇ ನಿನ್ನರಿವೋ ! ಇಷ್ಟರ ನಡುವೆಯೂ ' ಅವ ಬಂದಾನೇ?' ಎಂಬ ಸೊಡರುರಿಯುತಿತ್ತೆ ಮನದಲ್ಲಿ ? ಗೊತ್ತಿಲ್ಲ. ಮೌನ  ಸಿಧ್ಧಿಸಿದಾಗ, ಅಲೆಯೊಂದಿಗೆ ಶಾಂತವಾಗಿ ಹರಿವ ಎಲೆಯಾಗುತ್ತೆ ಮನ. ಅಲೆ ಎಲ್ಲಿ ವೈದರೂ ಸರಿ, ಹರಿದರು ಸರಿ, ಚಿಗುರಿದರೂ ಸರಿ , ಬಿದ್ದರೂ ಸರಿ ಈ ಕ್ರಿಯೆಯ ಕ್ರಿಯಾತ್ಮಕ ಶಕ್ತಿ ನಾನಲ್ಲ ಎಂಬ ವಿಶ್ವಾಸ  ಒಮ್ಮೊಮ್ಮೆ ಸಮಾಧಾನ ಕೊಡತ್ತೆ.

ನಾ ಪ್ರಯತ್ನಿಸುತ್ತಿದ್ದ  ಪಿ.ಎಚ್.ಡಿ. ಗೆ   ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ೨ -೫ ವರ್ಷ ಸಮಯವಿತ್ತು.
ಮೊದಲ ವರ್ಷದ ಮೊದಲರ್ಧ ಮುಗಿದು ರಜೆಯಲ್ಲಿ ಮನೆಗೆ ಹೋದೆ. ಮತ್ತದೇ ಊರು, ಮತ್ತದೇ ಸ್ಥಳಗಳು
ಆದರೆ ಬದಲಾದ ನಾನು. ಅವನ ನೆನಪಿನೊಂದಿಗೆ ನಾ ರಾಜಿಯಾಗಿದ್ದೆನೆ  ?

" तुम आशा विश्वास हमारे
तुम धरती आकाश हमारे.. रामा .... "

" ತಂದೆ ನೀ ನೀಡು ಬಾ ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ ಬಾಳ ಇರುಳಿಗೆ .."

6 comments:

  1. ಸ್ವರ್ಣಾ,
    ನಿಮ್ಮ ಕಥಾನಾಯಕಿ ತನ್ನ ಗುಂಗಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾಳೆ. ಆದರೆ ನಮಗೆ (ಓದುಗರಿಗೆ) ನಿಮ್ಮ ಕತೆಯ ಗುಂಗು ಹಿಡಿದಿದೆ!

    ReplyDelete
    Replies
    1. ಕೆಲ ಗುಂಗುಗಳಿಂದ ಹೊರ ಬರುವುದು ಬಹು ಕಷ್ಟ ಅಲ್ವಾ ಕಾಕಾ ?
      ಧನ್ಯವಾದಗಳು

      Delete
  2. ಒಳಗೂ ಮೌನ, ಮತ್ತೆ ಪ್ರಾರ್ಥನಾ ಮಂದಿರಕ್ಕೆ ಹೋಗಿಯೂ ಮೌನಿಯಾಗಿರುವ ತವಕ?

    ಮೇಲೆ, ಅವನ ನಿರೀಕ್ಷೆ!

    ಹೊಸ ಪರಿಸರದಲ್ಲೂ ಅಂತರ್ಮುಖಿ....

    ಬಳಸಿದ ಎರಡು ಗೀತೆಗಳೂ ನನಗೆ ಮೆಚ್ಚಿನವೇ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್.

      Delete
  3. ಸುವರ್ಣ ಅವರೇ,
    ಒಂದೇ ಗುಕ್ಕಿನಲ್ಲಿ ನಿಮ್ಮ ಎಲ್ಲಾ 'ಹಾಡು'ಗಳನ್ನು ಓದುತ್ತಿದ್ದೇನೆ.
    ಹಾಡು ಮನದ ಮೂಲೆಯಲ್ಲಿ ಎಲ್ಲೋ ಒಂದೆಡೆ ಪ್ರತಿಧ್ವನಿಸುತಿದೆ.

    ReplyDelete
    Replies
    1. ಧನ್ಯವಾದಗಳು ಸಾನ್ವಿ ಮನೆಯವರಿಗೆ.

      Delete