Thursday, October 25, 2012

ಬಾಳು ಬರೀ ಭಾವಗೀತವಲ್ಲ

ಹಿಂತಿರುಗಿ  ಬಂದ ಮೇಲೆ  ಥಿಸೀಸ್ , ಕೆಲಸ ಅಂತ ಮತ್ತೆ ತೊಡಗಿಕೊಂಡೆ.  ಆದರೂ ನನ್ನ ಒರಟು ವರ್ತನೆಯ ಮೀರಿ, ನಿಂತು ಮಾತಾಡಿದವನ ಒಳ್ಳೆತನದ ಬಗ್ಗೆ ಒಂದು ಸಣ್ಣ ಆಶ್ಚರ್ಯವಿತ್ತು. ಸಹಚರರಲ್ಲಿ  ಕಂಡ ಒಳ್ಳೆಯತನಕ್ಕೆ ಕರುಬುವುದು ಮಾನವ ಜೀವಿ ಮಾತ್ರ.  ಮೊದಲ ವರ್ಷ ಮುಗಿದು ಎರಡನೇ  ವರ್ಷದ ಅರ್ಧವೂ ಮುಗಿಯುತ್ತಾ ಬಂದಿತ್ತು.

ನಂತರದ ದಿನಗಳ ಪ್ರಮುಖ ಬದಲಾವಣೆ  ನಾ 'ಆಶಾ' ಎನ್ನುವ ಒಂದು ಸಂಸ್ಥೆಯೊಂದಿಗೆ ಹೆಚ್ಚು ಹೆಚ್ಚು ತೊಡಗಿಸಿಕೊಂಡದ್ದು.
ಕೆಲಸದ ನಿಮಿತ್ತ  ಅಲ್ಲಿಗೆ ಹೋಗ ಬೇಕಾಗಿ ಬಂದರೂ ಆ ಸಂಸ್ಥೆಯ ಧ್ಯೇಯೋದ್ದೇಶಗಳು , ಅಲ್ಲಿ ನಡೆಯುತ್ತಿದ್ದ ಚಿತ್ರಕಲೆಯ  ತರಗತಿಗಳು ಎಲ್ಲವೂ ನನಗೆ ಹಿಡಿಸಿದ್ದವು. ಕ್ಯಾಂಪಸ್ಸಿನ ಮೌನ ಮತ್ತೆ ದಕ್ಕಿತ್ತು.

ಮೊದಲರ್ಧದ  ರಜೆಯಲ್ಲಿ ಮನೆಗೆ ಹೋದಾಗ ಹೇಳಿಕೊಳ್ಳುವಂತಾದೇನೂ ನಡೆಯಲಿಲ್ಲ. ಅವ ಸಿಗಲಿಲ್ಲ. ಸಿಗದಿದ್ದುದರ ಬಗ್ಗೆ  ಯಾವ ಬೇಸರ ವಿರಲಿಲ್ಲ. ಅವನ ಹೊರತಾಗಿಯೂ  ನಾ  ಬದುಕನ್ನ ಕಂಡುಕೊಂಡಿದ್ದೆನೆ  ? ಬಾಳು ಬರಿ ಭಾವ ಗೀತೆಯಲ್ಲ ಅದು ಸ್ವಂತಂತ್ರ ಗೀತವೂ ಆದರೆ ಒಳಿತೆಂಬ ಸತ್ಯ ಅರ್ಥವಾಗಿತ್ತು.


ಉಪನ್ಯಾಸಕಿಯಾಗಿದ್ದಾಗ ಕೆಲವು ಹುಡುಗಿಯರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರುತ್ತಿದ್ದರು.
ಅವರಲ್ಲಿ ಕೆಲವರು ಯಾವುದೋ  ಒಬ್ಬ ಹುಡುಗನ ಬಗ್ಗೆ ತಮಗಿರುವ ಭಾವದ ಸ್ವರೂಪವೇನು  ಎಂದು ತಿಳಿದುಕೊಳ್ಳ ಬಯಸುತ್ತಿದ್ದರು. ನನಗೆ ನಗು ಬರುತ್ತಿತ್ತು. " ನನ್ನ ಭಾವವೇ ಸ್ಪಷ್ಟವಾಗಿಲ್ಲ ಪುಟ್ಟಕ್ಕ ನಿನ್ನ ಅನುಮಾನವನ್ನ ಹೇಗೆ ಪರಿಹರಿಸಲಿ?"
ಅಂತ ಹೇಳಲು ಬರದೆ ಏನೋ ಒಂದು ಹೇಳುತ್ತಿದ್ದೆ. ಈಗನ್ನಿಸುತ್ತೆ ಮನಸನ್ನ ತನ್ನಷ್ಟಕ್ಕೆ ತಾನು ಬಿಡ ಬೇಕು. ಅದು ತನ್ನಿಂದ ತಾನೆ ಉತ್ತರಗಳನ್ನು  ಕಂಡುಕೊಳುತ್ತದೆ. ರಾಡಿಯಾದ ನೀರು ಒಂದಿಲ್ಲೊಂದು ದಿನ ತಿಳಿಯಾಗತ್ತೆ.


ಮೊದಲ ವರ್ಷ ಮುಗಿಸಿ ಹೋದಾಗ ಅವನ ಮನೆ ಮುಂದೆಯೇ ಸಿಕ್ಕ, ನಿಂತ.  ಕುಶಲೋಪರಿ ಮಾತಾಡಿದೆವು.
ಅಂದು ನನ್ನಲ್ಲಾದ  ಬದಲಾವಣೆ ಎಂದರೆ ಅವ ಹೊರಡುತ್ತೇನೆಂದಾಗ ಇನ್ನೂ ಇರಲಿ ಅನ್ನಿಸಲಿಲ್ಲ. ಮಾತು ಮುಂದುವರೆಯ ಬೇಕಿತ್ತು ಅನ್ನಿಸಲಿಲ್ಲ. ಇವನ ಮನದೆಲ್ಲೆನಿದೆ ಎಂಬ ಪ್ರಶ್ನೆ ಕಾಡಲಿಲ್ಲ.   ಅವನ ನಗೆ ನನಗಂದೂ ಸುಂದರವೆನಿಸಿತ್ತು, ಅವನನ್ನು ಕಂಡ ಖುಷಿ ಇತ್ತು. ಹೊರಟಾಗ ಅವನ ಕೈತೋಟ ನೋಡಿದರೆ ಅಲ್ಲೊಂದು  ಪಾರಿಜಾತದ ಗಿಡವಿತ್ತು.

ಆ ಸಮಯದಲ್ಲಿನ ಡೈರಿಯ ಒಂದು ಪುಟ :  ಇಂತಹ ಪ್ರಶಾಂತ ಮನ ಸ್ಥಿತಿಯಲ್ಲಿ   ಅವನ ಬಗ್ಗೆ ಹೇಳಬೇಕೆಂದರೆ  ಹೊಳೆವುದಿಷ್ಟು , ತನ್ನ ರೂಪಿನ ಬಗ್ಗೆ ,ತನ್ನ ಪೂರ್ವಜರು ಸಂಪಾದಿಸಿದ ಆಸ್ತಿಯ ಬಗ್ಗೆ, ಮೆಡಿಕಲ್ ಓದುವಾಗಾಗಲಿ ,ಕೆಲವರಿಗೇ ದಕ್ಕುವ ಎಂ.ಡಿ. ಸೀಟ್ ಸಿಕ್ಕಿತು ಅಂತಾಗಲಿ ಅವ ಬೀಗಿದ್ದನ್ನ ನಾ ನೋಡಿಲ್ಲ. ಅವ ಬೀಗಿರಲಾರನೆಂಬುದು ನನ್ನ ನಂಬಿಕೆ , ಅದೇನೇ  ಇರಲಿ , ಅವನ ಬಗ್ಗೆ ಇನ್ನೂ ಹೆಚ್ಚು ತಿಳಿದಿದ್ದರೆ  ನನಗದೆ ಭಾವ ಉಳಿಯುತಿತ್ತೆ ? ಎಂಬ ಪ್ರಶ್ನೆ ಆಗಾಗ ನನ್ನ ಕಾಡುತಿತ್ತು. ಸಂಗಾತಿಯೊಡನೆ ಒಂದೇ ಸೂರಿನಡಿ ಇರಲಾರಂಭಿಸಿದ  ಮೇಲೆ, ಇಷ್ಟು ದಿನ ಕಂಡಿರದ, ಅವನ ಅದೆಷ್ಟೋ ಅವ ಗುಣಗಳು ಬೆಳಕಿಗೆ ಬರ ಬಹುದು.  ಮಾನವ ಸಹಜ ಸಣ್ಣತನಗಳನ್ನ ಕಡೆಗಣಿಸಿ ಪ್ರೀತಿಸುವುದು ಒಂದು ರೀತಿಯ ತಪಸ್ಸು. ಅಂತಹ ತಪಸ್ಸಿಗೆ ಎರಡೂ ಮನಗಳ ನಡುವೆ ಒಂದು ಸಮಾನಾಂತರ ಅಗತ್ಯವೇ ?   ಖಲೀಲ್ ಗಿಬ್ರಾನ್ ತನ್ನ ಮ್ಯಾರೇಜ್  ಎನ್ನುವ ಒಂದು ಪದದಲ್ಲಿ ಹೇಳುತ್ತಾನೆ,  "ಪ್ರಾರ್ಥನೆಯಲ್ಲೂ ನಿಮ್ಮ ಸಂಗಾತಿ ನಿಮ್ಮೊಡನಿರಲಿ  ಆದರೆ ನಿಮ್ಮ ನಡುವೆ ಒಂದು ಆರೋಗ್ಯಕರ ಮೌನವಿರಲಿ. ಒಬ್ಬರನೊಬ್ಬರು ಪ್ರೀತಿಸಿ , ಬಂಧಿಸದಿರಿ  , ಪ್ರೇಮವೆಂಬುದು ನಿಮ್ಮ ಆತ್ಮಗಳ ನಡುವೆ ಹರಿವ ನದಿಯಾಗಲಿ, ಒಬ್ಬರ  ತಟ್ಟೆಯನ್ನೊಬ್ಬರು   ತುಂಬಿ ,ಆದರೆ ನಿಮ್ಮ ತಟ್ಟೆ ಬೇರೆಯಾಗಿರಲಿ". ಮಾನವನ ಜೊತೆ ಸಂಬಂಧಗಳೂ ಬೆಳೆಯಬೇಕು , ಬೆಳೆಯದ ಯಾವುದೇ  ವಸ್ತು ಜಗದಲ್ಲಿ ನಿರ್ಜೀವ ವಾಗುತ್ತದೆ. ಜೀವವಿಲ್ಲದ ಬಂಧಗಳು ಬದುಕಲಾರವು. ಅಜ್ಞಾತ ಕವಿಯೊಬ್ಬ ಹೇಳಿದಂತೆ "ಕೆಲ ಬಂಧಗಳು ನನ್ನನ್ನ ಮೀರಿ ಬೆಳೆದವು, ನಾನು ಕೆಲವನ್ನ ಮೀರಿ ಬೆಳೆದೆ ". (Some  relationships outgrew me, I outgrew some )  ಅವನನ್ನ  ಮೀರಿ ನಾನುಬೆಳೆದಿರಲಿಲ್ಲ ವೆಂಬುದಕ್ಕೆ ಸಾಕ್ಷಿ  ನನಗವನ ಬಗ್ಗೆ ಇದ್ದ ಯಾವುದೇ ಭಾವ ಬದಲಾಗಿರಲಿಲ್ಲ. ಅವ ನನ್ನ ಮೀರಿ ಬೆಳೆದನೇ ? ಗೊತ್ತಿಲ್ಲ.

ಬಹುತೇಕ ಮನಸಿನ ಖಾಹಿಲೆಗಳಿಗೆ (?)   ಔಷಧಿಗಳಿಲ್ಲ, ಕಾಣದ ಮನಸ್ಸಿನ, ಕಂಡು ಹಿಡಿಯಲು ಬಹು ಕಷ್ಟದ ,  ಕಾಣದ ಖಾಹಿಲೆಗಳಿಗೆ ಔಷಧಿಗಳಿರಲು ಹೇಗೆ ಸಾಧ್ಯ?   ಇರುವುದು ಮನಃಶಾಸ್ತ್ರಜ್ಞರೊಂದಿಗಿನ ಸಮಾಲೋಚನೆ ಮತ್ತು ಕೆಲವು 'ಮತ್ತು' ಬರಿಸುವ ಮಾತ್ರೆಗಳು. ತೊಳಲಾಟದಿಂದ  ಬಳಲುವ  ಕೆಲವರು (ಅವರನ್ನು ರೋಗಿಗಳೆನ್ನಲು ಮನಸೊಪ್ಪದು ) ಸಮಾಲೋಚನೆಗಳಿಂದ  ಚೇತರಿಸಿಕೊಂಡರೆ ಇನ್ನು ಕೆಲವರು ತಮ್ಮ ಬಂಧು  ಮಿತ್ರರ  ಸಹಾಯದಿಂದ, ಪ್ರಾರ್ಥನೆ ಧ್ಯಾನಗಳಿಂದ  ಉತ್ತಮ ಮನಃಸ್ಥಿತಿಯನ್ನ ಕಂಡುಕೊಳ್ಳುತ್ತಾರೆ. ನನ್ನ ಪದವಿಗಾಗಿ , ಈಗ ಪ್ರಬಂಧಕ್ಕಾಗಿ ಅದೆಷ್ಟೋ ಸಮಾಲೋಚನೆಗಳನ್ನ ನಾನು ಕಂಡೆ, ಅದರೊಟ್ಟಿಗೆ ಬದುಕಿನ ಹಲ ಮುಖಗಳನ್ನೂ.

ಹುಡುಗ ಹುಡುಗಿಯರಿಗೆ ಸಾಮಾನ್ಯವಾಗಿ ಪ್ರೀತಿಯನ್ನು ಹೇಳುವ ತನಕ ಅದನ್ನು ಹೇಳಿದರೆ ಸಾಕಾಗಿರತ್ತೆ.  ಹೇಳಿ ಸಂಗಾತಿ ಒಪ್ಪಿಕೊಂಡ ಮೇಲೆ  ಮೇಲೆ ಅವನ / ಅವಳ ಪ್ರತೀ ಕ್ರಿಯೆಯನ್ನು ಒರೆಗೆ ಹಚ್ಚಿ ಅದರಲ್ಲಿ ಪ್ರೀತಿ ಎಂಬ ಭಾವ ಇತ್ತೇ ಇಲ್ಲವೇ ? ಅನ್ನೋ ಪ್ರಶ್ನೆಯ ಉತ್ತರವೇ ಮುಖ್ಯವಾಗುತ್ತದೆಯೇ ? ಬದುಕೇಕೆ ಹೀಗೆ ?   ಹಾರುತ್ತಿದ್ದ ಹಕ್ಕಿಯನ್ನು ತಂದು ಪಂಜರದಲ್ಲಿಟ್ಟರೆ ಅದು ಹಾಡದೆಂಬ ಸತ್ಯ ಅರಿವಾಗುವ ಹೊತ್ತಿಗೆ  ಹಕ್ಕಿ ಮೂಕವಾಗಿರುತ್ತದೆ.  ಬಾನಾಡಿಗಳು ಬಾನಲ್ಲಿದ್ದರೆ ಚಂದ, ಅವು ಬದುಕಲು ಬೇಕಾಗುವ ಪರಿಸರ ಕಲ್ಪಿಸಿದರೆ ಸಾಕು ಅವು ತಮ್ಮ ಹಾಡು ಮತ್ತು ಹಾದಿಯನ್ನು ಹುಡುಕಿಕೊಳ್ಳುತ್ತವೆ . ಸಂಬಧವೊಂದನ್ನ ಕಟ್ಟಿ ಹಾಕಲೆತ್ನಿಸಿದರೆ  ಅದೂ ಮೂಕ ಹಕ್ಕಿಯೇ. 

ಇತ್ತೀಚಿನ ದಿನಗಳ ಇನ್ನೊಂದು ಬದಲಾವಣೆ ಎಂದರೆ ಆರೋಗ್ಯವಾಗಿದ್ದೆವೆಂದು ಖಾತ್ರಿ ಮಾಡಿಕೊಳ್ಳಲು ಜನ ಡಾಕ್ಟರ ಹತ್ತಿರ ಹೋಗುತ್ತಿದ್ದರು. ಇದು ಖಾಹಿಲೆಗಳನ್ನ ಪ್ರಾರಂಭದಲ್ಲೇ ಕಂಡು ಹಿಡಿದು ಗುಣ ಪಡಿಸಲು ಸಹಾಯಕಾರಿ ಅಂತ ಕೆಲವರಂದರೆ ಇದು ಅನಾವಶ್ಯಕ ಅನ್ನೋದು ಇನ್ನೂ ಕೆಲವರ  ಅಭಿಪ್ರಾಯ. ದೈಹಿಕ ರೋಗಗಳ ಡಾಕ್ಟರಿಗಷ್ಟೇ  ಅಲ್ಲ  ಮಾನಸಿಕ ತಜ್ಞರಿಗೂ ಒಳ್ಳೆ ಬೇಡಿಕೆ ಬಂದಿತ್ತು. ಸಾಫ್ಟ್ ವೇರ್ , ಹಾರ್ಡ್ ವೇರ್ , ಸ್ಪೆಷಲಿಸ್ಟ್ , ಸೂಪರ್ ಸ್ಪೆಷಲಿಸ್ಟ್ , ಕನ್ಸಲ್ ಟಂಟ್ಗಳ ಮಧ್ಯೆ ಬದುಕು ಹರಿದು ಹಂಚುತ್ತಿದೆಯೇ? ಸಾಲ ಮಾಡಿ ಪುಟ್ಟದೊಂದು ಮನೆ ಮಾಡಿದರೆ, ಮಗು ಶಿಶುವಿಹಾರದಲ್ಲಿ ತಂದೆ ತಾಯಿ ಕಛೇರಿಯಲ್ಲಿ , ವಾರಾಂತ್ಯದಲ್ಲಿ ಮನೆ ಬೋರೆಂದು ಮತ್ತೆ ಹೊರಗೆ ! ಛಾಪಾ ಕಾಗದದ ಮೇಲಿನ ಮನೆಗೆ ಸಾಲ ಮಾಡ ಬೇಕಿತ್ತೆ ? ಕಾಲಾಯ ತಸ್ಮೈ ನಮಃ.

ಈ ಕಗ್ಗವೇಕೋ ಇಂದು ಬಹಳ ನೆನಪಾಗುತ್ತಿದೆ. 
’ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ' 


ಅವಧಿಗಾಗಿ ಗುಲ್ಜಾರರ ಬಗ್ಗೆ ಬರೆದ್ದದ್ದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  


4 comments:

  1. ಸ್ವರ್ಣಾ,
    ಕಿಶೋರಿಯು ಪ್ರೌಢಳಾಗುತ್ತಿರುವ ಬದಲಾವಣೆ ತುಂಬ ಚೆನ್ನಾಗಿದೆ. ಡೈರಿಯನ್ನು ಉಪಯೋಗಿಸಿಕೊಳ್ಳುವ ರೀತಿಯನ್ನು ಮೆಚ್ಚಿದೆ. ಅಲ್ಲದೆ, ನಿಮ್ಮ ಓದೂ ಸಹ ವಿಶಾಲವಾಗಿದೆ ಎನ್ನುವುದು ಇಲ್ಲಿ ತಿಳಿಯುತ್ತಿದೆ!

    ReplyDelete
    Replies
    1. ಕಾಕಾ ತಮ್ಮ ಮೆಚ್ಚುಗೆಗೆ ಅಭಾರಿ

      Delete
  2. ಇಲ್ಲಿಯವರೆಗೂ ನಾನು ಓದಿಕೊಂಡು ಬಂದ ಪುಟಗಳಲ್ಲಿ, ನನಗೆ ತೋಚದ್ದು ಹುಡುಗಿ ಯಾಕಿಷ್ಟು ಮೌನಿ ಅಥವ ಒರಟೂ ಅಂತ! ಬಹುಶಃ ಅದು ಆಕೆಯ ಮನೋ ಸ್ಥಿತಿಯೇ ಇದ್ದಿರಬಹುದೇನೋ?

    ನಿಜ, ಸ್ವತಃ ನಾಯಕಿಯ ಮನಸ್ಸಿನಲ್ಲಿ ಅವನ ಬಗೆಗೆ ತಳೆಯಲಾರದ ಸ್ಪಷ್ಟ ನಿರ್ಧಾರವನ್ನು ಇಟ್ಟುಕೊಂಡು, ವಿದ್ಯಾರ್ಥಿನಿಯರ ಹುಡುಗರ ಬಗ್ಗೆ ಏನು ತಾನೇ ಅಭಿಪ್ರಾಯ ಕೊಟ್ಟಾಳು?

    ನಾನೇ ಕಂಡಂತೆ ಗಂಡ ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವುದು, ಮಗು ಮನೆಯಲ್ಲಿ ಬಂಧಿ. ದಿನವೆಲ್ಲ ಗೋಡೆಗಳ ಜೊತೆ ಮಾತನಾಡುವ ಮಗುವಿಗೆ ಅಪ್ಪ ಅಮ್ಮನೇ ಬಹು ಪಾಲು ಅಪರಿಚಿತ!

    ಎರಡು ಕೋಣೆಗಳ ಕಗ್ಗ ಕೊಟ್ಟು ಒಳ್ಳೆಯದನ್ನು ಮಾಡಿದ್ದಿರಿ. ನಾನೂ ಈ ರೀತಿ ರೂಪಿಸಿಕೊಳ್ಳುತ್ತೇನೆ.

    ReplyDelete
    Replies
    1. :) ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು ಬದರಿ ಸರ್.

      Delete