Thursday, November 17, 2011

ಮನುಜ ಸಂತತಿಯ ಹಾಡು

ಮರದ ಎಲ್ಲ ಎಲೆಗಳೂ ಉದುರಲು ಇನ್ನು ಸ್ವಲ್ಪ ಕಾಲವಿದೆ
ಬಾಗಿ ಧರೆಗುರಳಲು ಕಾಯುತ್ತಿರುವಂತಿದೆ
ಇನ್ನು ಉರುಳಿಲ್ಲವಾದ್ದರಿಂದ ನೀರು ಗೊಬ್ಬರದ ಅಗತ್ಯವಿದೆ.
ಬಾಡಲು ಸಜ್ಜಾಗಿರುವ ಮರವಾದ್ದರಿಂದ  ಎಲ್ಲ ತುಸು  ಹೆಚ್ಚೆನಿಸುವಷ್ಟೇ ಬೇಕು.
ಮಾಗುವ ಕಾಲ ಬಂದರೂ ಯಾವುದೋ ಕಾಲದಲ್ಲಿ  ಕೊಟ್ಟೆನೆಂಬ ಗರ್ವವಿನ್ನು ಅಳಿದಿಲ್ಲ !

ತುಸುದೂರದಲ್ಲೇ ಮೊಳಕೆಯೊಂದು ಚಿಗುರೊಡೆಯಲು ಕಾಯುತ್ತಿದೆ.
ಬೆಳೆವ ಸಸಿಯಾದ್ದರಿಂದ ಎಲ್ಲ ಸರಿಯಾದ ಪ್ರಮಾಣದಲ್ಲೇ ನೀಡಬೇಕು.
ಹೆಚ್ಚು ಗೊಬ್ಬರವೂ ಅಪಾಯಕಾರಿ !
ಸತ್ವವಿರುವ ಮೊಳಕೆಯಾದರೆ ಯಾವ ಪೋಷಣೆಯೂ ಇಲ್ಲದೆ ಬೆಳೆದೀತು
ಇನ್ನು ಬೆಳೆಯದ ಸಸಿಯಾದರೂ ನಾಳಿನ ಭರವಸೆ ನಾನು ಎಂಬ ಭಾವ ಅದಕೆ !

ಮಧ್ಯೆ ನಾನೆಂಬ ಗಿಡ
ಚಿಗುರಿಗೆ ನೆರಳೂ ಬೇಕು, ಬಿಸಿಲೂ ಬೇಕು, ಪೋಷಣೆಯೂ ಬೇಕು
ಅಷ್ಟನ್ನು ವ್ಯವಸ್ಥೆ ಮಾಡುವಷ್ಟರಲ್ಲಿ, ಮರ ಎಲೆ ಉದುರಿಸಿ ಶಬ್ದ ಮಾಡುತ್ತದೆ
ಮರದ ಎಲೆಗಳ ಗೊಬ್ಬರ ಮಾಡಿ, ಎರಡಕ್ಕೂ ಹಂಚುವಷ್ಟರಲ್ಲಿ ಬುಟ್ಟಿ ಎಲ್ಲ ಖಾಲಿ !
ಬಹು ಕಾಲವಾಯಿತು ನನ್ನ ಚಿಗುರ ಕಂಡು !

2 comments:

  1. ಸೃಷ್ಟಿ ನಿರಂತರವಾಗಿ ಸಾಗಬೇಕಾದರೆ ಮೊಳಕೆಯು ಗಿಡವಾಗಿ ಬೆಳೆಯಬೇಕು. ಮರವಾಗಿ ಮಾಗಬೇಕು. ಹಣ್ಣೆಲೆಗಳು ಉದುರಿ ಗೊಬ್ಬರವಾಗಬೇಕು.ಎಲ್ಲ ಜೀವಿಗಳಿಗೂ ಇದು ಅನ್ವಯಿಸುತ್ತದೆ, ಅಲ್ಲವೆ? ಸೃಷ್ಟಿಕ್ರಮವನ್ನು ಸುಂದರವಾಗಿ ಕವನಿಸಿದ್ದೀರಿ. ಕವನದ ಭಾವವು ಸಂಕೀರ್ಣವಾದಾಗಲೂ ಸಹ,ರಚನೆಯನ್ನು ಸರಳವಾಗಿಸುವ ಕಲೆ ನಿಮಗೆ ಸಿದ್ಧಿಸಿದೆ.

    ReplyDelete
  2. ಧನ್ಯವಾದಗಳು ಸರ್

    ReplyDelete