ಚಿತ್ರ ಕೃಪೆ : ಅಂತರ್ಜಾಲ
'ನಾನು' ಯಾರೆಂದು ತಿಳಿಯದು ಯಾರಿಗೂ
ತನ್ನ ಎಲೆಯ ರೂಪ ತಿಳಿಯದು ಬೇರಿಗೂ
ಮಾನವ ಜನ್ಮ ತಳೆದು,
ಹೆಣ್ಣಾಗಿ ಬೆಳೆದು ,
ಒಮ್ಮೆ ಕಂಡೆ ಅವನ ,
ಮನವ ತಣಿಸಿದ ಮಾಧವನ .
ಮದುವೆಯಾಯ್ತು ,
ಮಗುವೂ ಆಯ್ತು ,
ತಾಳಿಯಾಗಲಿಲ್ಲ ಬೇಲಿ ,
ಮುಂದಿರಲು ಆ ವನಮಾಲಿ.
ಲೋಕಕ್ಕೆ ತಿಳಿಯದೆಮ್ಮ ಹೆಸರು,
ಅವನೇ ನಮ್ಮ ಉಸಿರು ,
ಕ್ರೂರಿಯಾದ ಅಕ್ರೂರ ನಮ್ಮ ಮೇಲೆ,
ಇದಾವ ವಿಧಿಯ ಲೀಲೆ ?
ಚಾರಿತ್ರ್ಯ ಶಂಕಿಸಿದವರೆಷ್ಟೋ ?
ಹೆಂಡತಿಯ ಕಲ್ಲಾಗಿಸಿದವರೆಷ್ಟೋ?
ಅಂಥವರ ಮಧ್ಯೆ ಅವ ಸರ್ವಗುಣ ಶೀಲ,
ದೇಹವ ಮೀರಿದ್ದು ಶೀಲವೆಂದು ತೋರಿಸಿದ ಮುರಳಿಲೋಲ.
ಅವನಿಲ್ಲದ ಮೇಲೆ ಇನ್ನೆಲ್ಲಿ ಗಾನ ಗಂಗೆ,
ಮಾಧುರ್ಯವನೆಲ್ಲ ವಯ್ದನವ ಮಧುರೆಗೆ,
ಪ್ರೇಮ ಗಂಗೆಯಲೆಮ್ಮ ಪುನೀತರನಾಗಿಸಿದ
ಬದುಕಿನ ಸತ್ಯಾ ಸತ್ಯತೆಗಳ ತಿಳಿಸಿ ವಿನೀತರನಾಗಿಸಿದ

ಪ್ರಿಯ ಸ್ವರ್ಣ ಅವರೇ,
ReplyDeleteಇಂದಿಗೂ ಎಂದೆಂದಿಗೂ ಜಗತ್ತಿನಲ್ಲಿ ಅಮಿತ ಪ್ರೇಮಕ್ಕೆ ಸಂಕೇತವಾಗಿ ನಿಲ್ಲುವ ಜೋಡಿ ರಾಧಾ-ಕೃಷ್ಣ, ಕಡೆಗೆ ಹೆಸರಿನಲ್ಲೂ ಪರಸ್ಪರ ಬೇರ್ಪಡಿಸಲಾರದ ಈ ಪ್ರೇಮೋತ್ಕಟತೆ ದಾಂಪತ್ಯಕ್ಕೆ ಮಾದರಿ.
ನಿಮ್ಮ ಈ ಕವನ ಆ ರಾಧೆಯ ಒಳಾಂತರಗವನ್ನು ತೆರೆದಿಡುತ್ತಾ, ತನ್ನ ಸುಪ್ತ ಅಳಲನ್ನೂ ನಮಗೆ ಹೇಳಿಕೊಳ್ಳುತ್ತದೆ. ಆ ತೀವ್ರ ಗಳಿಗೆಯಲ್ಲಿಯೂ ಆಕೆ ಎಲ್ಲಿಯೂ ಮುರಳಿ ಲೋಲಲನನ್ನು ತನ್ನ ಪ್ರಾಪ್ತ ಕರ್ಮಕ್ಕೆ ನಿಂದಿಸುವುದಿಲ್ಲ. ಆಕೆಯ ಅಪರಿಮಿತ ಪ್ರೀತಿಗೆ ಪರಮಾತ್ಮನೂ ಅಷ್ಟೇ ಒಲವನ್ನೂಡಿಸಿದ್ದು ತತ್ಯ.
ನಿಮ್ಮ ಶೈಲಿಯೇ ಸರಾಗ ಸುಲಲಿತ ಯಮುನಾ ವಿಹಾರ. ಬರೆಯ ಬೇಕಾದ್ದನ್ನು ತಿಳಿಸಬೇಕಾದ್ದನ್ನು ನಮ್ಮ ಮನಸ್ಸಿನಾಳಕ್ಕೆ ನಾಟಿಸುವ ನಿಮ್ಮ ಶಕ್ತಿಗೆ ನಮ್ಮ ಜೋಹಾರು...
ಸರ್ ಇದು, ನಾನು ಗೋಕುಲ ಅಸಂಖ್ಯಾತ ಗೋಪಿಕೆಯರಿಗಾಗಿ ಬರೆದದ್ದು :)
ReplyDeleteರಾಧೆಗಾಗಿ ಈ ಹಿಂದೆ ಬರೆದಿದ್ದೆ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಸ್ವರ್ಣಾ
ನಿಮ್ಮ ಶೈಲಿಯೇ ಸರಾಗ ಸುಲಲಿತ ಯಮುನಾ ವಿಹಾರ.
ReplyDeleteಧನ್ಯವಾದಗಳು ಸರ್.
ReplyDeleteಸ್ವರ್ಣಾ,
ReplyDeleteಊರಲ್ಲಿ ಇರಲಿಲ್ಲ. ಇದೀಗ ನಿಮ್ಮ ಕವನವನ್ನು ಓದಿದೆ.
ಅನುರಾಗದ ನೈಜ ಮುಖವನ್ನು ತೋರಿಸುವ ನಿಮ್ಮ ಕವನ ಸುಂದರವಾಗಿದೆ.
ಅಭಿನಂದನೆಗಳು.
ಧನ್ಯವಾದಗಳು ಕಾಕ.
ReplyDelete