Thursday, November 15, 2012

ಎಡಕಲ್ಲು ಗುಡ್ಡದ ಮೇಲೆ

 ಇದು ಎಡಕಲ್ಲು ಗುಡ್ಡದ ಮೇಲೆ ಚಿತ್ರದ ವಿಮರ್ಶೆ ಖಂಡಿತಾ ಅಲ್ಲ !

ಈ ವಾರ ಕೇರಳಕ್ಕೆ ಹೋಗೋಣ್ವಾ? ಅಂತ  ಶ್ರೀಯುತರು ಕೇಳಿದಾಗ,  ಆಫಿಸಿಗೆ ಏನೋ ಒಂದು ಕಾರಣ ಹೇಳಿ ಶುಕ್ರವಾರ ಹೊರಟ್ವಿ. ಒಳ್ಳೆ ಪಯಣ ಅದು. ಬಂಡೀಪುರ ದಾರಿ ಬಂದಾಗ ಪ್ರಾಣಿ ಕಾಣತ್ತೆ ಅಂತ ಕಾದಿದ್ದೆ ಬಂತು, ಕಾರಲ್ಲಿದ್ದ ನಾವು ೬ ಜನರನ್ನ ಬಿಟ್ಟು ಬೇರೆ ಯಾವ ಪ್ರಾಣಿಯೂ ಕಾಣಲಿಲ್ಲ !  ನಮ್ಮ ಮನೆಯ ಮಧ್ಯೆ ಯಾರಾದರೂ ರಸ್ತೆ ಮಾಡಿಕೊಂಡು
ಸದಾ ಕಾಲ ರೊಂಯ್ಯೊ....  ಅಂತ ಗಾಡಿಯಲ್ಲಿ ಓಡಾಡ ತೊಡಗಿದರೆ ? ಅನ್ನಿಸಿತ್ತು .

ಮಾತುಂಗ ವನ್ಯ ಧಾಮ ದಾರಿಯಲ್ಲಿ ಸಿಕ್ತು. ನೋಡೋಣ ಅಂತ ಕಾರ್ ನಿಲ್ಲಿಸಿ ಟಿಕೆಟ್ ತರಲು ಗಂಡಸರು ಓಡಿದರು. ೮೦೦ ರೂ ಕೊಟ್ಟು, ಟಿಕೆಟ್ ಕೊಡುವವನನ್ನ "ಪ್ರಾಣಿಗಳು ಕಾಣಿಸ್ತಾವೇನಪ್ಪ ?"  ಅಂದರೆ ಅವನು "ನಿಮ್ಮ ಅದೃಷ್ಟ ಪರೀಕ್ಷಿಸಿ" ಅಂದನಂತೆ. ಒಳಗೆ ಕಂಡದ್ದು ಜಿಂಕೆಗಳು, ಎರಡು ನವಿಲು ಮಾತ್ರ, ಹಾಂ ಆನೆ ಲದ್ದಿ ಮತ್ತು ಹುಲಿ ಹೆಜ್ಜೆ ನೋಡಿದ್ವಿ !

ಹೊರಗೆ ಬಂದರೆ "ಎಡ್ಕಲ್ ಕೇವ್ಸ್, ಇಲ್ಲೇ ಅಂತೆ, ಹೋಗೋಣ್ವಾ?" ಅಂದ್ರು. ಯಾವ್ದಪ್ಪ ಅದು 'ಎಡ್ಕಲ್ ಕೇವ್ಸ್' ? ಅಂದುಕೊಂಡು,   ನಾನು ಸರಿ ಅಂದೆ. ಬಹುಶಃ ಎಡಕಲ್ಲು ಗುಡ್ಡದ ಮೇಲೆ  ಚಿತ್ರವನ್ನ ಇಲ್ಲೇ ಎಲ್ಲೋ ತೆಗೆದಿರ ಬಹುದು ಅಂತ  ಒಂದು ನಿಮಿಷ ಅನ್ನಿಸಿದರೂ "ಛೆ ಛೆ, ಅಷ್ಟು ಹಿಂದೆ ಪುಟ್ಟಣ್ಣ ಇಲ್ಲಿವರೆಗೂ ಬಂದಿರಲಾರರೆನೋ ?" ಒಂದು ವಿರುಧ್ಧ ಆಲೋಚನೆ ಬಂದಿತ್ತು.  'ಕೇವ್ಸ್' ಇನ್ನು ಸ್ವಲ್ಪ ದೂರ ಅನ್ನೋವಾಗ ಒಂದು ಅಂಗಡಿಯವರು ನಿಲ್ಲಿಸಿ ಒಂದು ಕಿಲೋಮೀಟರ್ ನಡಿ ಬೇಕು, ಕಾರ್ ಪಾರ್ಕಿಂಗ್ ಇಲ್ಲೇ ಅಂತ ಕಾರ್ ನಿಲ್ಲಿಸಿ ಬಿಟ್ಟ, ಬಿಸಿಲಿದೆ ಟೋಪಿ ತೊಗೊಳಿ ಅಂತ ಟೋಪಿನೂ ಹಾಕಿದ! ನಾವು ಇಲ್ಲಿ ಇದೊಂದೇ ಅಂಗಡಿ ಏನೋ, ಭಾರಿ ಪ್ರಶಾಂತ ಸ್ಥಳ ಅಂದ್ಕೊಂಡ್ಬಿಟ್ವಿ.  ನಡ್ಕೊಂಡ್ ಮುಂದೆ ಹೋದ್ರೆ ಸಾಲು ಸಾಲು ಅಂಗಡಿಗಳು !  ಹೋಂ ಮೇಡ್ ಚಾಕ್ಲೇಟ್ಸ್, ಟೋಪಿ ಅದೂ ಇದೂ ಅಂತ ಮಾರ್ತಿದ್ರು. ನಮ್ಮ ಜೊತೆ ೨ ಸಣ್ಣ ಮಕ್ಕಳಿದ್ದರಿಂದ ಮತ್ತೆ ಕೇಳಿದ್ವಿ , " ' ಕೇವ್ಸ್' ಎಷ್ಟು ದೂರ ? "  ಅಂತ  ಇಲ್ಲೇ ಸ್ವಲ್ಪ ದೂರ 'ಆಣೋ' ಅಂತ ಕುಟ್ಟಿಗಳು ಉಲಿದರು.   ರೋಡು ಸ್ವಲ್ಪ ಇಳಿಜಾರು ಅನ್ನಿಸಿದರೂ ಇಷ್ಟು ದೂರ ಬಂದಿದೇವೆ ನಡೆದು ಬಿಡುವ ಅಂತ ಹುಮ್ಮಸ್ಸಿನಲ್ಲಿ ಹೊರಟು ಬಿಟ್ಟೆವು.

ಆರಂಭದ ಹಾದಿ..ಹೆಜ್ಜೆ ಮೂಡದ ಹಾದಿ


ಮತ್ತೆ ದಾರಿ ಉದ್ದಕ್ಕೂ ಅಂಗಡಿಗಳು.  ಇನ್ನೇನು ಮುಗಿಯತ್ತೆ ಇನ್ನೇನು ಮುಗಿಯತ್ತೆ ಅಂತ ನಡೆದರೆ  ದಾರಿ ಮುಗಿದದ್ದು ಒಂದು ಆಫೀಸಿನ ಮುಂದೆ. ಅಲ್ಲಿ ಒಬ್ಬರಿಗೆ ೧೫ ರೂ ನಂತೆ ಟಿಕೆಟ್, ಕ್ಯಾಮೆರಾಗೆ ಬೇರೆ ಟಿಕೆಟ್  ಮತ್ತು ದುಡ್ಡು ಕೊಟ್ಟು ಖರಿದಿಸಿದ ಮಿನರಲ್ ವಾಟರ್ ಬಾಟಲಿಗೆ ೧೫ ರೂ ಒಂದರಂತೆ ಡೆಪಾಸಿಟ್ ಇಡಬೇಕು ಅಂದರು , ಕೇಳಿದ್ದಕ್ಕೆ ಇದು ಪ್ಲಾಸ್ಟಿಕ್ ಮುಕ್ತ ಪ್ರದೇಶ ನೀವು ಅಲ್ಲಿ ಇಲ್ಲಿ  ಕಸ  ಎಸಿಬಾರ್ದು ಅಂತ, ಈ ವ್ಯವಸ್ಥೆ ಅಂದ್ರು. ವಾಹ್ ! ಕೇರಳ ಪ್ರವಾಸೋದ್ಯಮ ಅಂತ ನಾನು ಫುಲ್ ಖುಷ್ ಆಗಿದ್ದಕ್ಕೆ , ಶ್ರೀಯುತರು  "ತಡಿ , ತಡಿ  ಈಗಲೇ ಜಾಸ್ತಿ  ಹೋಗಳಬೇಡ, ಮೊದ್ಲು ಪೂರ್ತಿ ನೋಡು" ಅಂದ್ರು.

ಆಫೀಸು 
ಟಿಕೆಟ್ ಟಿಕೆಟ್...



 ಟಿಕೆಟ್ಗಳನ್ನ, ಬ್ಯಾಗನ್ನ ಪರೀಕ್ಷೆ  ಮಾಡಿ ಒಬ್ಬಕಾವಲುಗಾರ ನಮ್ಮನ್ನು ಒಳ ಬಿಟ್ಟ.


 ನಾವು ಇಳಿಯುವಾಗ ಜನ ಸಂದಣಿ ಕಡಿಮೆಯಾಗಿತ್ತು. ಕಾವಲುಗಾರ ಕೂತಿದ್ದ, ಮೇಲಿನ ಚಿತ್ರ ಆಗ ತೆಗೆದದ್ದು.


ಇನ್ನೇನು ಇನ್ನೊಂದು ಹತ್ತು ಹೆಜ್ಜೆ ನಡೆದರೆ ನಮ್ಮ 'ಕೇವ್ಸ್' ಕಾಣ ಬಹುದು ಅಂತ ನಾನು ಹೋದೆ.  ಹತ್ತು ಹೆಜ್ಜೆ ನಡೆದರೆ ಕಂಡಿದ್ದು ರಾಶಿ ಜನ ಮತ್ತು ಏರಿ ಅಭ್ಯಾಸವಿಲ್ಲದವರಿಗೆ ಕಡಿದಾದ ಬೆಟ್ಟ.


ಬೆಟ್ಟ ಇಳಿವಾಗ..


ಸ್ವಲ್ಪ ದೂರ ಹೋದ ಕೂಡಲೇ ಕನ್ನಡ ಮಾತಾಡುತಿದ್ದ ಒಂದು ಮಕ್ಕಳ ಗುಂಪು ಬಂತು, ನಾವು ಕನ್ನಡ  ಮಾತಾಡುತ್ತಿದ್ದ ಕೇಳಿ "ಹಾಯ್ ಪಾಪು" ಅಂತ ಮಕ್ಕಳನ್ನ ಮಾತಾಡಿಸಿದರು. ಭಾಷೆ ಬರದ ನಾಡಲ್ಲಿ ನಮ್ಮ ಭಾಷೆಯವರು ಕಂಡರೆ ಒಂಥರಾ ಸಂತೋಷ, ಮಾತಾಡಿಸಿ ಮಕ್ಕಳಿಗೆ ಚಾಕ್ಲೆಟ್ ಕೊಟ್ಟು "ಏನ್ ಆಂಟಿ, ಈ ಪಾಪು ಫುಲ್ ಹತ್ತುತಾನ?" ಅಂತ ಒಂದು ಪ್ರಶ್ನೆ ತೇಲಿ ಬಿಟ್ಟು ಇಳಿದು ಬಿಟ್ರು.  'ಕೇವ್ಸ್' ಹುಡುಕುತ್ತಿದ್ದ ನಮಗೆ ಮತ್ತಷ್ಟು ದಿಗಿಲು, ಅದರಲ್ಲೂ ನಮ್ಮ ಜೊತೆಗಿದ್ದ ಒಂದು ಮಗು ನಾ ನಡಿಯಲಾರೆ ಅಂತ ಆಗಾಗ ಸತ್ಯಾಗ್ರಹ ಮಾಡುತಿತ್ತು.

"ಏನಾಗಲಿ ಮುಂದೆ ಸಾಗು ನೀ " ಅಂತ ಕಿಚ್ಚನನ್ನು ನೆನೆಸಿ ಮುಂದೆ ಹೊರಟ್ವಿ. ಒಂದು ಪಾಯಿಂಟ್ನಲ್ಲಿ ಒಬ್ಬೊಬ್ಬರೇ ಹತ್ತ ಬೇಕು ಅಥವಾ ಇಳಿಯಬೇಕು , ಪಕ್ಕದಲ್ಲಿ ಒಂದು ಕೂಡ ಬಹುದಾದ ಕಲ್ಲು. ನಾವು ಇನ್ನೇನು ಅಲ್ಲಿ ಕೂತು ಕೊಳ್ಳಬೇಕೆಂದಿರುವಾಗ  ಅಲ್ಲಿ ಒಬ್ಬ ಕಾವಲುಗಾರ ಜೊತೆಗೆ ಬೂದು ಬಣ್ಣದ ಅಂಗಿ ತೊಟ್ಟ ಒಬ್ಬ ಮನುಷ್ಯ ಕಂಡರು. "ಇಲ್ಲಿ ನಿಲ್ಲುವ ಹಾಗಿಲ್ಲ ಸ್ವಲ್ಪ ಹತ್ತಿ ರೆಸ್ಟ್ ತೊಗೊಳಿ" ಅಂತ ಕಳಿಸಿ ಬಿಟ್ರು. ಮತ್ತೆ ನಾನು ಕೇರಳ ಪ್ರವಾಸೋದ್ಯಮ ವಾಹ್ ವಾಹ್ ಅಂತ ವರಸೆ ಹಾಡಿದೆ.

ಕೇರಳ ಪ್ರವಾಸೋದ್ಯಮ ಸಿಬ್ಬಂದಿ

 ಹತ್ತಿ ನೋಡಿದರೆ ಒಂದು ಸಣ್ಣ ಗುಹೆ, ಮೂಲೆಯಲ್ಲಿ ಪೈಪಿನಿಂದ ಬರುತ್ತಿದ್ದ ನೀರು ಪಕ್ಕ ಮತ್ತೆ ಕಬ್ಬಿಣದ  ಮೆಟ್ಟಿಲು. ಅದನ್ನೂ ಹತ್ತಿದರೆ ಕಂಡದ್ದು ರಾಶಿ ರಾಶಿ ಹಸಿರು, ಇದೆ ಕೊನೆ ಅಂತ  ಖುಷಿಯಾಗಿರುವಾಗ, ಹಿಂದಿಂದ ಮಾನವ ಧ್ವನಿ ಕೇಳಿ ತಿರುಗಿದರೆ, ಮೇಲಿಂದ ಕೆಲ ಜನ ಇಳಿದು ಬರುತ್ತಿದ್ದರು !
ನಿತ್ಯ ಹರಿದ್ವರ್ಣ ವನದ ತೇಗ  ಗಂಧ ತರುಗಳಲ್ಲಿ..


ಮತ್ತೆ  ಹತ್ತಿ, ಮೊದಲು ಮಾಡಿದ ಕೆಲಸ ಅಲ್ಲಿ ನಿಂತಿದ್ದ ಬೂದು ಅಂಗಿಯವನನ್ನ "ಇದೆ ಕೊನೆ ತಾನೇ?" ಅಂತ ಕೇಳಿ ಖಾತ್ರಿ ಮಾಡಿ ಕೊಂಡದ್ದು. ನಂತರ 'ಕೇವ್ಸ್' ಒಳ ಹೋದರೆ ಕಂಡದ್ದು  ಮೇಲಿಂದ ನುಸುಳುತ್ತಿದ್ದ  ಬೆಳಕಲ್ಲಿ ಮಂದವಾಗಿ ಕಂಡ ಗೋಡೆಯ ಮೇಲೆ ಬರೆದ ಚಿತ್ರಗಳು . ಮತ್ತೆ ಒಬ್ಬ ಬೂದು ಬಣ್ಣದ ಅಂಗಿಯವ ಬಂದು 'ಕೇವ್ಸ್' ಇತಿಹಾಸ ಹೇಳ್ತೇನೆ ಅಂದ. ಸರಿ ಅಂತ ನಾನೇ ಎಲ್ಲರ ಪರವಾಗಿ ನಿರ್ಧರಿಸಿ ನಿಂತು ಬಿಟ್ಟೆ.  "ಅಲ್ಲಿ ಹೋಗಿ ನೋಡಿ ಬನ್ನಿ "  ಅಂತ ಮೂಲೆಯಲ್ಲಿದ್ದ ಒಂದು ಸ್ಟೀಲಿನ ಬಾಗಿಲನ್ನ ತೋರಿಸಿದ. ಅಲ್ಲಿಂದ ನೋಡಿದರೆ ಸುಂದರ ವನ ರಾಶಿ ಕಾಣುತಿತ್ತು. ಮತ್ತೆ ಬಂದು ಅವನ ಮುಂದೆ ನಿಂತರೆ  ಈ ಗುಡ್ಡ ದಲ್ಲಿನ ಕಲ್ಲುಗಳ ರಚನೆ ಇಂದಾಗಿ ಇದಕ್ಕೆ 'ಎಡಕಲ್' ಎಂಬ ಹೆಸರು ಬಂದಿದೆ.  ಇಲ್ಲಿ ಕಾಣುವ ಚಿತ್ರಗಳು ಸಾವಿರಾರು ವರ್ಷದ ಹಿಂದೆ ಆದಿ ಮಾನವರು ಬರೆದದ್ದು ಅಂತ ಮನುಷ್ಯ, ಪ್ರಾಣಿಗಳು ಮತ್ತು ಇನ್ನೇನೇನೋ ಚಿತ್ರಗಳನ್ನ ತೋರಿಸಿದ. ರಕ್ಷಣೆಗಾಗಿ ಮನುಷ್ಯ ಇಂತಹ ಜಾಗಗಳನ್ನ ಸಾವಿರಾರು ವರ್ಷಗಳ ಹಿಂದೆ ಕಂಡುಕೊಂಡಿದ್ದ. ಅಲ್ಲಿ ಹುಲಿ ಕೊಂದ ಧೀರನೊಬ್ಬ ತನ್ನ ಗಾಥೆಯನ್ನ ಬರೆದುಕೊಂಡಿದ್ದ. ಅದು ಆದಿ ಮಾನವರ ಚಿತ್ರಕ್ಕಿಂತ ಭಿನ್ನವಾಗಿತ್ತು. ಆದ್ದರಿಂದ ಅದು ಕೆಲ ನೂರು ವರ್ಷ ಹಳೆಯದು ಅಂತ ನಮ್ಮ ಗೈಡ್ ಹೇಳಿದ. ಆತ ಕೊಟ್ಟ ಪೂರ್ಣ ಮಾಹಿತಿ ನೆನಪಿಲ್ಲ.

ಆದ್ರೆ  ಕೊನೆಯಲ್ಲಿ ಆತ ಹೇಳಿದ್ದು  ಚೆನ್ನಾಗಿ ನೆನಪಿದೆ . ಕನ್ನಡ ಸಿನೆಮ 'ಎಡಕಲ್ಲು ಗುಡ್ಡದ ಮೇಲೆ' ತೆಗೆದದ್ದು ಇಲ್ಲೇ ಅಂದಾಗ ನನಗೆ  'ಸಂತೋಷ..... ' ಹಾಡಿನಲ್ಲಿ ಬರುವ ದಾರಿ,  ಆರತಿ ಕುಳಿತು ಧ್ಯಾನಸ್ಥರಾಗುವ ದೃಶ್ಯ ಕಣ್ಣ ಮುಂದೆ ಬಂದಿತ್ತು. ಸಿನಿಮಾ ತೆಗೆದದ್ದು ಕೆಳಗಿನ ಗುಹೆಯಲ್ಲಿ, ಅದರಲ್ಲಿ ಕಾಣುವ ಸಣ್ಣ ಫಾಲ್ಸ್ ಅನ್ನು  ಪುಟ್ಟಣ್ಣ  ಕೃತಕವಾಗಿ ಸೃಷ್ಟಿಸಿಕೊಂಡಿದ್ದರು ಅಂದ. ಅಂದರೆ ನಾವು ಕೆಳಗೆ ಮೂಲೆಯಲ್ಲಿ ನೋಡಿದ ಪೈಪ್ ನಿಂದ ಬರುತ್ತಿದ್ದ ನೀರು ಪುಟ್ಟಣ್ಣನವರು ಹಾಕಿಸಿದ್ದೆ ? ಅಂತ ನನಗೆ ಅನುಮಾನ ಬಂತು.  ಎಲ್ಲ ವಿವರಣೆ ಮುಗಿಸಿ ನಾವು ಅವನಿಗೆ ದುಡ್ಡು ಕೊಡಲು ಹೋದರೆ "ಬೇಡ" ಅಂದ.  ನಾನು 'ಗಾಡ್ಸ್ ಓನ್  ಕಂಟ್ರಿಗೆ ಜೈ' ಅಂದೆ. ಆದರೂ ನಾವು ಅವನಿಗೆ ದುಡ್ಡು  ಕೊಟ್ವಿ.


ಕೆಳಗಿನ ಗುಹೆಯಲ್ಲಿ ಒಂದಷ್ಟು ಚಿತ್ರ ತೆಗೆದು 'ಸಂತೋಷ.....' ಅಂತ ಕೆಳಗೆ ಇಳಿಯುವಾಗ ನನಗೆ  'ಎಡಕಲ್ ಕೇವ್ಸ್' ಅಂದರೆ  'ಎಡಕಲ್ಲು ಗುಡ್ಡ' ಅಂತ  ನನಗೆ ಜ್ಞಾನೋದಯವಾಯ್ತು.


ಎಡಕಲ್ ಗುಡ್ಡದಲ್ಲಿ  ಎಲ್ಲೆಡೆ ಸಿಗುವ ಚಿಪ್ಸ್ ಮತ್ತು ತಂಪು ಪಾನೀಯಗಳು ಕಾಣಲಿಲ್ಲ. ಬದಲಾಗಿ ಕಂಡದ್ದು  ಉಪ್ಪಿಗೆ  ಹಾಕಿಟ್ಟ ಮಾವಿನ ಕಾಯಿ, ನೆಲ್ಲಿ ಕಾಯಿ, ಕ್ಯಾರೆಟ್ ಮತ್ತು ಅನಾನಸ್ ಹಣ್ಣು.











ನಾವು ಒಂದೆರಡು ಸಣ್ಣ ಡಬ್ಬದಲ್ಲಿ ನೆಲ್ಲಿ ಕಾಯಿ, ಮಾವಿನ ಕಾಯಿ ಮತ್ತು ಪಕ್ಕದಲ್ಲಿ ಒಂದು ಪಾತ್ರೆ ಮಜ್ಜಿಗೆ ಇಟ್ಟುಕೊಂಡಿದ್ದ  ಒಬ್ಬ ಹೆಂಗಸಿನ ಹತ್ತಿರ ಮಜ್ಜಿಗೆ ಕೊಂಡೆವು. ಸಣ್ಣ ವ್ಯಾಪಾರಸ್ಥರಿಗೆ ಪ್ರೋತ್ಸಾಹ ಕೊಡುವ  ಮಹದುದ್ದೇಷ ! ಹೆಂಗಸಿನ ನಗೆ ಇಷ್ಟ ಆಗಿ ಫೋಟೋ ತೆಗಿಲಾ ಅಂದ್ರೆ ಆಕೆ ಫುಲ್ ಖುಷ್, ಇವಳದ್ದೂ ತೆಗಿರಿ ಅಂತ ತನ್ನ ಸ್ನೇಹಿತೆಯನ್ನೂ  ಕರೆದಳು.

ನಗುತಾ ನಗುತಾ ನಲಿ ನಲಿ













ಇಳಿವಾಗ ಅಚ್ಚರಿ ಎನಿಸುವ ಫಲಕ ಒಂದು ಕಣ್ಣಿಗೆ ಬಿತ್ತು , ಕರ್ನಾಟಕದ ಅಡುಗೆಗಳಿಗೂ ವಿಶೇಷತೆ ಇದೆ ಅಂತ ಜನರಗಿಗೆ ಗೊತ್ತಾಗಿದ್ದಕ್ಕೆ ಖುಷಿಯಾಯಿತು.
ಇಂಥ ಖಾನಾವಳಿಗಳು ಹೆಚ್ಚಲಿ



'ಎಡಕಲ್ ಕೇವ್ಸ್' ನಮ್ಮ ಎಡಕಲ್ ಗುಡ್ದವಾದದ್ದು ಖುಷಿ ಕೊಟ್ಟಿತ್ತು.
 
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಬಗ್ಗೆ :  ಈ ಚಿತ್ರ ನಾನು ನೋಡಿದ್ದು ಬಹುಶಃ ನಾನು ಸ್ಕೂಲ್ ನಲ್ಲಿದ್ದಾಗ.  ಚಿತ್ರದ ವಿಷಯ  ಎಲ್ಲರಿಗೂ ತಿಳಿದಂತೆ ಗಂಡು ಹೆಣ್ಣಿನ ದೈಹಿಕ ಸಂಬಧ, ಅದರ ಬಗ್ಗೆ ಚಿತ್ರಮಾಡಿದ್ದು  ಆ ಕಾಲಕ್ಕೆ
ತುಂಬಾ 'ಬೋಲ್ಡ್' ಎನಿಸಿಕೊಂಡ ವಿಷಯ.  ಬರೆದ ಭಾರತೀ ಸುತರು, ಪುಟ್ಟಣ್ಣ ಮತ್ತು ಅಂತಹ ಪಾತ್ರವನ್ನು ಪೋಷಿಸಿದ ಅಭಿನಯ ಶಾರದೆ ಜಯಂತಿ ಮೂವರೂ ಅಭಿನಂದನಾರ್ಹರು.  ಇಂದು ಆ ಚಿತ್ರ ತೆಗೆದಿದ್ದರೆ ಬಹುಶಃ ಅದರ ಕೊನೆ ಬೇರೆಯಾಗಿರುತ್ತಿತ್ತೇನೋ ? ಹೇಳುವುದು ಕಷ್ಟ, ಕಾಲಮಾನದಿಂದ ಮುಂದೆ ಸರಿದು ಯೋಚಿಸುವ ಕಲಾವಿದನಿಗೊಂದು ಸಲಾಮು.

8 comments:

  1. ೮೦೦ ರೂಪಾಯಿಗೆ ಬರೀ ಜಿಂಕೆಗಳು, ಎರಡು ನವಿಲು ಮಾತ್ರವೇ? ಅಯ್ಯೋ...

    ಕಡಿದಾದ ಬೆಟ್ಟಗಳೆಂದರೆ, ನನಗೆ ಆಗದು. ಈ ಟ್ರೆಕ್ಕಿಂಗ್ ನನಗೆ ಸಾಧ್ಯವಿಲ್ಲ.

    ಅಲ್ಲೂ ಕನ್ನಡ ಊಟ ಸಿಗುತ್ತದೆ ಎಂದ ಮೇಲೆ ಪರವಾಗಿಲ್ಲ ಅನಿಸಿತು.

    ಎಡಕಲ್ ಕೇವ್ಸ್ ನಮ್ಮ ಎಡಕಲ್ ಗುಡ್ದ ಬರಹ ಚಿತ್ರಗಳ ಸಮೇತ ಸೂಪರ್ರೂ...

    ReplyDelete
    Replies
    1. ಧನ್ಯವಾದಗಳು ಬದರಿ ಸರ್
      ಛಾಯಾಗ್ರಾಹಕರಾದ ನೀವು ಇನ್ನೂ ಒಳ್ಳೆ ಚಿತ್ರ ತೆಗೀಬಹುದು

      Delete
  2. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಬಿಡುಗಡೆಯಾದಾಗ, ನೋಡಿ ತುಂಬ ಖುಶಿಯಾಗಿತ್ತು. ಈಗ ನಿಮ್ಮ ಲೇಖನ ಓದಿ ಮತ್ತಷ್ಟು ಸಂತೋಷವಾಯಿತು. ಪುಟ್ಟಣ್ಣ ಎನ್ನುವ ಆ ಮಹಾನುಭಾವ ನಮಗೆ ಒಳ್ಳೆಯ ಚಿತ್ರಗಳನ್ನು ಕೊಡಲು ಎಷ್ಟೆಲ್ಲ ಕಷ್ಟಪಟ್ಟಿದ್ದಾನಲ್ಲ ಎಂದು ಅಚ್ಚರಿಯಾಯಿತು. ಲೇಖನಕ್ಕಾಗಿ thanks, ಸ್ವರ್ಣಾ!

    ReplyDelete
    Replies
    1. ಪ್ರೋತ್ಸಾಹಕ್ಕೆ ನಿಮಗೇ ನಾನು ಥ್ಯಾಂಕ್ಸ್ ಹೇಳಬೇಕು ಕಾಕಾ ನೀವಲ್ಲ :)
      ಥ್ಯಾಂಕ್ಸ್

      Delete
  3. staLa parichaya noDi khushiyaaytu....

    adanna tumbaa sundaravaagi PuTTaNNA torisidru...

    thank you...

    ReplyDelete
    Replies
    1. ಧನ್ಯವಾದಗಳು, ಬಹಳ ದಿನದ ನಂತರ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು.

      Delete
  4. ಮೇಡಂ...ತುಂಬಾ ಸುಂದರವಾಗಿದೇ ಎಡಕಲ್ ಗುಡ್ಡದ ಕಥೆ...ಪ್ರತಿಯೊಂದನ್ನು ಎಳೆ ಎಳೆಯಾಗಿ ಬಿಡಿಸಿ ಬರೆದಿರುವ ನಿಮ್ಮ ನೋಟ ಇಷ್ಟವಾಯಿತು. ಹೌದು ಪುಟ್ಟಣ್ಣ ಅವರ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಚಿತ್ರೀಕರಣ ಇಲ್ಲೇ ನಡೆದದ್ದು...ಆ ಕೊಳದ ದೃಶ್ಯ ಸ್ಟುಡಿಯೋ ಸೆಟ್ಟಿಂಗ್. ಆದ್ರೆ ಸುಮಾರು 35 ವರ್ಷಗಳ ಹಿಂದೆ ಈಗಿನಷ್ಟು ಸೌಲಭ್ಯ ಇಲ್ಲದ ಸಮಯದಲ್ಲೂ ಇಲ್ಲಿಯ ತನಕ ಬಂದು ಚಿತ್ರೀಕರಣ ಮಾಡಿದ ಅವರು ಕಥೆಗೆ ಒಟ್ಟು ಕೊಡುವ ಮಹತ್ವ, ಚಿತ್ರೀಕರಣದ ಸ್ಥಳ ಎಲ್ಲವು ಶ್ಲಾಘನೀಯ...ಅಂಥಹ ಮಹನೀಯರನ್ನು ನೆನೆದು ಬರೆದಿರುವ ಈ ಲೇಖನ ಅಭಿನಂದನೆಗೆ ಅರ್ಹ..ಹಾಗೆ ನಿಮಗೂ ಕೂಡ ಅಭಿನಂದನೆಗಳು

    ReplyDelete